ತುಪ್ಪದ ಆಂಜನೇಯ ಎಂದೇ ಪ್ರಸಿದ್ದಿ ಹೊಂದಿರುವ ಈ ಆಂಜನೇಯ ಸ್ವಾಮಿಯು ಬಳ್ಳಾಪುರ ಪೇಟೆ ಆರ್‌.ಟಿ.ಸ್ಟ್ರೀಟ್‌ ನಲ್ಲಿರುವ ತುಪ್ಪದ ಆಂಜನೇಯ ಭಕ್ತರಿಗೆ ಬಲು ಹತ್ತಿರ ಇದಕ್ಕೆ ಕಾರಣವೂ ಇದೆ ಬಹುತೇಕ ದೇಗುಲಗಳಲ್ಲಿರುವಂತೆ ಇಲ್ಲಿನ ಗರ್ಭಗುಡಿಗೆ ಬಾಗಿಲು ಇಲ್ಲ, ಭಕ್ತರೇ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸುವ ಅವಕಾಶವಿದೆ.

ತುಪ್ಪದ ಆಂಜನೇಯ ಸ್ವಾಮಿ ದೇವಾಲಯದ ದಕ್ಷಿಣ ಭಾಗದಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಾಲಯವಿದೆ ಶ್ರೀ ರಂಗನಾಥ ಸ್ವಾಮಿಗೆ ಕೈ ಮುಗಿಯುತ್ತಿರುವಂತೆ ಸ್ವಾಮಿಯ ವಿಗ್ರಹವಿದೆ ತುಪ್ಪದ ದೀಪ ಹಚ್ಚಿ ಬೇಡಿಕೊಂಡರೆ ಶ್ರೇಯಸ್ಸಾಗಲಿದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದು ಬೇಡಿದ್ದು ಈಡೇರಿದ ಬಳಿಕವೂ ತುಪ್ಪ ದೀಪ ಹಚ್ಚಿ ಹರಕೆ ತೀರಿಸುವುದು ವಾಡಿಕೆ ಇದೇ ಕಾರಣದಿಂದ ಸ್ವಾಮಿಗೆ ತುಪ್ಪದ ಆಂಜನೇಯ ಸ್ವಾಮಿ ಎಂಬ ಹೆಸರು ಬಂದಿದೆ ದೇಗುಲವು ಶ್ರೀ ತುಪ್ಪದ ಆಂಜನೇಯಸ್ವಾಮಿ ಟ್ರಸ್ಟ್‌ ವತಿಯಿಂದ ನಿರ್ವಹಣೆಗೊಳ್ಳುತ್ತಿದೆ.

ದೇವಾಲಯದ ಇತಿಹಾಸ: ದೇವಾಲಯಕ್ಕೆ ಸುಮಾರು 400 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ ದೇವಾಲಯ ಸ್ಥಾಪನೆಯಾಗಲು ಶುಕದೇವ ಎಂಬ ಬೈರಾಗಿ ಮೂಲ ಕಾರಣ ಎನ್ನಲಾಗುತ್ತಿದೆ. ಶುಕದೇವ ಹಿಂದೊಮ್ಮೆ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಕೆಲ ಕಾಲ ತಂಗಿದ್ದರು ಆ ಸಂದರ್ಭ ಮಂತ್ರ ಶಕ್ತಿಯಿಂದ ಅಪರಂಜಿ, ಬಂಗಾರವನ್ನು ಸೃಷ್ಟಿಸಿ, ಸದ್ವಿನಿಯೋಗ ಮಾಡುತ್ತಿದ್ದರು ಇದನ್ನು ಕಂಡ ಶ್ರೀರಂಗನಾಥ ಸ್ವಾಮಿ ದೇಗುಲದ ಅರ್ಚಕರು ತಮಗೂ ಆ ವಿದ್ಯೆಯನ್ನು ಅನುಗ್ರಹಿಸುವಂತೆ ಕೋರಿದ್ದರು ಗೃಹಸ್ಥಾಶ್ರಮದಲ್ಲಿರುವ ನಿಮಗೆ ಈ ವಿದ್ಯೆ ಸಿದ್ಧಿಸದು ಇದರ ಬದಲಿಗೆ ನಿಮ್ಮಿಂದ ಒಂದು ಕಾರ್ಯವಾಗಬೇಕು ಎಂದು ಶುಕದೇವ ಅವರಲ್ಲಿ ಹೇಳಿದ್ದರು.

ಶ್ರೀ ಆಂಜನೇಯ ಸ್ವಾಮಿಯ ಶಿಲಾ ಪ್ರತಿಮೆ ಸ್ಥಾಪನೆ ಮಾಡಿ, ಸ್ವಾಮಿ ಎರಡೂ ಮಗ್ಗಲುಗಳಲ್ಲೂ ಸದಾಕಾಲ ತುಪ್ಪದ ದೀಪಗಳನ್ನು ಬೆಳಗಿಸಬೇಕು ಭಕ್ತಿ, ಶ್ರದ್ಧೆಯಿಂದ ಪ್ರದಕ್ಷಿಣೆ ಮಾಡಿ ಆರಾಧಿಸಬೇಕು ಆಗ ಸ್ವಾಮಿಯ ಅನುಗ್ರಹ ಸಿಗುತ್ತದೆ ಎಂದು ಹೇಳಿದ್ದರು ಅದರಂತೆ ಅರ್ಚಕರು ಭಕ್ತರ ನೆರವಿನೊಂದಿಗೆ ದೇವಾಲಯ ನಿರ್ಮಿಸಿದ್ದರು ಎಂಬ ಪ್ರತೀತಿ ಇದೆ.

ಗರ್ಭಗುಡಿಗೆ ಬಾಗಿಲಿಲ್ಲ: ದೇವಾಲಯದ ಜೀರ್ಣೋದ್ಧಾರದ ಸಂದರ್ಭದಲ್ಲಿ ಗರ್ಭಗುಡಿಗೆ ಬಾಗಿಲು ನಿರ್ಮಿಸಲು ಸಿದ್ಧತೆ ನಡೆಸಲಾಗಿತ್ತು ಆ ಸಂದರ್ಭ ಜೀಣೋದ್ಧಾರದ ಮುಂದಾಳತ್ವ ವಹಿಸಿದ್ದ ಭಕ್ತರೊಬ್ಬರ ಸ್ವಪ್ನದಲ್ಲಿ ಬಂದ ಸ್ವಾಮಿಯು, ಭಕ್ತರು ಎಲ್ಲಾ ಕಾಲದಲ್ಲೂ ನೇರವಾಗಿ ಬಂದು ಗರ್ಭಗುಡಿ ಪ್ರವೇಶಿಸಿ ಸ್ವತಃ ಪೂಜೆ ಸಲ್ಲಿಸುವಂತಿರಬೇಕು ಹೀಗಾಗಿ ಗರ್ಭಗುಡಿಗೆ ಬಾಗಿಲು ನಿರ್ಮಿಸಬಾರದು ಎಂದು ಹೇಳಿದ್ದರು ಎಂಬ ಪ್ರತೀತಿ ಇದೆ.

ವಿಶೇಷ ಪೂಜೆ : ಹನುಮಜಯಂತಿ ಸಂದರ್ಭದಲ್ಲಿ ದೇವಾಲಯ ಆವರಣದಲ್ಲಿ ಬ್ರಹ್ಮರಥೋತ್ಸವ ನಡೆಯುತ್ತದೆ 9 ಮಡಿ ತೇರು ಹಾಗೂ 15 ದಿನಗಳ ಕಾಲ ವಿಶೇಷ ಅಲಂಕಾರ ಹಾಗೂ ಪೂಜೆ ನಡೆಯುತ್ತದೆ ರಾಮನವಮಿಗೆ ಮುಂಚಿತವಾಗಿ ಯುಗಾದಿ ಹಬ್ಬದ ದಿನದಿಂದಲೇ 48 ದಿನಗಳ ಕಾಲ ನಿತ್ಯ ಅಭಿಷೇಕ, ವಿಶೇಷ ಪೂಜೆ ನಡೆಯುತ್ತದೆ ಕೊನೆಯ ದಿವಸ ರಾಮಪಟ್ಟಾಭಿಷೇಕ ನಡೆಯುತ್ತದೆ ಶ್ರಾವಣ ಶನಿವಾರ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಸ್ವಾಮಿಗೆ ವಜ್ರಕವಚ ತೊಡಿಸಿ ಪೂಜೆ ಮಾಡಲಾಗುತ್ತದೆ ಪ್ರತಿ ಶನಿವಾರ ಸ್ವಾಮಿಗೆ ವಿಶೇಷ ಪೂಜೆ ನಡೆಯುತ್ತದೆ.

ದೇವಾಲಯದಲ್ಲಿ ಹಲವು ಭಕ್ತರು ತುಪ್ಪದ ದೀಪದ ಹರಕೆ ಹೇಳಿಕೊಳ್ಳುತ್ತಾರೆ ಹರಕೆ ಈಡೇರಿದ ಬಳಿಕ ತುಳಸಿ ಅರ್ಪಿಸಿ, ತುಪ್ಪದ ದೀಪ ಹಚ್ಚುತ್ತಾರೆ ಭಕ್ತರೇ ಗರ್ಭಗುಡಿ ಒಳಗೆ ಪ್ರವೇಶಿಸಿ ಪೂಜೆ ಸಲ್ಲಿಸಬಹುದಾಗಿದೆ. ಸಮಯ: ಬೆಳಗ್ಗೆ 6ರಿಂದ 11, ಸಂಜೆ 6ರಿಂದ 8.30, ವಿಳಾಸ : ಶ್ರೀ ತುಪ್ಪದ ಆಂಜನೇಯಸ್ವಾಮಿ ದೇವಾಲಯ, ಆರ್‌.ಟಿ.ಸ್ಟ್ರೀಟ್‌.

Leave a Reply

Your email address will not be published. Required fields are marked *