ನಮಸ್ತೆ ಶುಭ ಮುಂಜಾನೆ ಪ್ರಿಯ ಓದುಗರೇ, ನಮ್ಮ ದೇಶದಲ್ಲಿ ಹೇಗೆ ದೇವಾನುದೇವತೆಗಳನ್ನು ಪೂಜೆ ಮಾಡ್ತೀವಿ ಹಾಗೆ ಮಹಿಮಾನುತರರಾದ ಗುರುಗಳನ್ನು ಪೂಜೆ ಮಾಡ್ತೀವಿ, ಅದ್ರಲ್ಲಿ ತಮ್ಮನ್ನು ನಂಬಿ ಬರುವವರನ್ನು ಕೈ ಬಿಡದ ಗುರುಗಳ ಮಹಿಮೆ ಅಪಾರವಾದದ್ದು. ಬನ್ನಿ ಇಂದಿನ ಲೇಖನದಲ್ಲಿ ಲಕ್ಷಾಂತ ಜನರ ಕಷ್ಟಗಳನ್ನು ನೀಗಿಸುವ ಲಚ್ಯಾಣದ ಶ್ರೀ ಸಿದ್ದಲಿಂಗ ಮಹಾರಾಜರ ಪುಣ್ಯ ಭೂಮಿಯನ್ನು ದರ್ಶನ ಮಾಡಿ ಕೃತಾರ್ಥರಾಗೋಣ. ಕಮರಿ ಮಠ ಎಂದೇ ಖ್ಯಾತವಾಗಿರುವ ಲಚ್ಯಾಣದಲ್ಲಿ ಶ್ರೀ ಶ್ರೀ ಸಿದ್ದಲಿಂಗ ಮಹಾರಾಜರು ನೆಲೆನಿಂತು ತನ್ನ ಬಳಿ ಬರುವ ಭಕ್ತರನ್ನೂ ಉದ್ಧರಿಸುತ್ತಿದ್ದು ಹಿಂದೆ ರುದ್ರಭೂಮಿ ಆಗಿದ್ದ ಈ ಸ್ಥಳವು ಸಿದ್ದಲಿಂಗ ಮಹಾರಾಜರ ಪಾದ ಸ್ಪರ್ಶದಿಂದ ಇಂದು ಪುಣ್ಯ ಕ್ಷೇತ್ರವಾದ ಅಸಂಖ್ಯಾತ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಮುಖ್ಯದ್ವಾರ, ಗೋಪುರ, ವಿಶಾಲವಾದ ಪ್ರಾಂಗಣವನ್ನು ಒಳಗೊಂಡಿರುವ ಈ ಮಠದಲ್ಲಿ ಗುರು ಶ್ರೀ ಶ್ರೀ ಸಿದ್ದಲಿಂಗ ಮಹಾರಾಜರ ಸುಂದರವಾದ ಮೂರ್ತಿಯನ್ನು ನಾವು ನೋಡಬಹುದಾಗಿದೆ. ಪ್ರಶಾಂತವಾದ ವಾತಾವರಣವನ್ನು ಹೊಂದಿರುವ ಈ ಕ್ಷೇತ್ರಕ್ಕೆ ಬಂದರೆ ಮನದ ಕ್ಲೇಶಗಳೆಲ್ಲವೂ ಮಂಜಿನಂತೆ ಕರಗಿ ಹೋಗುತ್ತದೆ. ಇನ್ನೂ ಸಿದ್ದಲಿಂಗ ಮಹಾರಾಜರು ಒಬ್ಬ ಪವಾಡ ಪುರುಷರಾಗಿದ್ದು ಇವರು 1848 ರಲ್ಲೀ ಕಕ್ಕಳಮೇಲಿ ಗ್ರಾಮದಲ್ಲಿ ಜನಿಸಿದರು, ಚಿಕ್ಕ ವಯಸ್ಸಿನಲ್ಲೇ ಆಧ್ಯಾತ್ಮ ಬಗ್ಗೆ ಆಸಕ್ತಿಯನ್ನು ಹೊಂದಿದ್ದ ಸಿದ್ದಲಿಂಗ ಮಹಾರಾಜರು ದೊಡ್ಡವರಾಗುತ್ತಿದ್ದ ಹಾಗೆ ಗುರು ಶಂಕರ ಲಿಂಗರ ಸೇವೆ ಮಾಡುತ್ತಾ, ಗುರುಗಳ ಆದೇಶದಂತೆ ಲಚ್ಯಾಣ ಗ್ರಾಮಕ್ಕೆ ಬಂದು ಕಮರಿ ಮಠವನ್ನು ಕಟ್ಟಿದರೆಂದು ಹೇಳಲಾಗುತ್ತದೆ.

ಇವರ ಭಕ್ತಿಗೆ ಮೆಚ್ಚಿ ಗುರು ಶಂಕರ ಲಿಂಗ ಮಹಾ ಶಿವಯೋಗಿಗಳು ಶ್ರೀ ಸಿದ್ದಲಿಂಗ ಮಹಾರಾಜರಿಗೆ ನಿನ್ನ ಸೇವೆ ಮಾಡುವ ಇಚ್ಛೆ ಇಟ್ಟುಕೊಂಡ ಜನರು ಉದ್ಧಾರವಾಗಲಿ, ಲಾಚ್ಯಾಣ ಮಠವು ಸುಕ್ಷೇತ್ರ ವಾಗಿ ಕೈಲಾಸದಂತೆ ಶುಭಾಯಮಾನವಾಗಿ ಬೆಳೆಯಲಿ, ನಿನ್ನ ಕೀರ್ತಿ ಯುಗಾಯುಗಾಂತದವರೆಗೆ ಜಗತ್ತಿನಲ್ಲಿ ಉಳಿಯಲಿ ಎಂದು ಆಶೀರ್ವಾದ ಮಾಡಿದರಂತೆ, ಅದರ ಫಲವಾಗಿ ಇಂದಿಗೂ ಕೂಡ ಇವರನ್ನು ನಂಬಿರುವ ಭಕ್ತರ ಕೈಯನ್ನು ಸಿದ್ದಲಿಂಗ ಮಹಾರಾಜರು ಬಿಟ್ಟಿಲ್ಲ ಎನ್ನುವುದಕ್ಕೆ ಇವರು ತಮ್ಮ ಭಕ್ತರ ಕನಸಿನಲ್ಲಿ ಬಂದು ಅವರ ಸಮಸ್ಯೆಗಳಿಗೆ ಪರಿಹಾರ ತಿಳಿಸುತ್ತಾರೆ ಎಂಬುದೇ ಜೀವಂತ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೆ ಹಿಂದೆ ನಮ್ಮ ದೇಶವನ್ನು ಬ್ರಿಟೀಷರು ಅಳುತ್ತಿದ್ದಾಗ ಸಿದ್ದಲಿಂಗ ಮಹಾರಾಜರ ದರ್ಶನಕ್ಕೆಂದು ಇಬ್ಬರು ಸಾಧುಗಳು ರೈಲಿನಲ್ಲಿ ಟಿಕೆಟ್ ಇಲ್ಲದೆ ಬರುತ್ತಾ ಇದ್ದರು ಇದನ್ನು ಕಂಡ ಟಿಕೆಟ್ ಕಲೆಕ್ಟರ್ ಕೋಪಗೊಂಡು ಆ ಸಾಧುಗಳಿಗೆ ಬಾಸುಂಡೆ ಬರುವ ಹಾಗೆ ಹೊಡೆದರು ಆ ಸಾಧುಗಳಿಗೆ ಬೀಳುತ್ತಿದ್ದ ಪೆಟ್ಟು ಸಿದ್ದಲಿಂಗ ಮಹಾರಾಜರ ಮೈ ಮೇಲೆ ಬಿತ್ತು. ಆಗ ಕೋಪಗೊಂಡ ಸಿದ್ದರಾಜರು ವೇಗವಾಗಿ ಚಲಿಸುತ್ತಿದ್ದ ರೈಲನ್ನು ತಮ್ಮ ಅಮೋಘ ಶಕ್ತಿಯಿಂದ ತಮ್ಮ ಹಸ್ತವನ್ನು ತೋರಿಸಿ ನಿಲ್ಲಿಸಿದರು ನಂತರ ಬ್ರಿಟೀಷರು ಬಂದು ಇವರ ಬಳಿ ಕ್ಷಮೆ ಯಾಚಿಸಿದ ಮೇಲೆ ಸಿದ್ದಲಿಂಗರು ರೈಲನ್ನು ಮತ್ತೆ ಮುಂದೆ ಚಲಿಸುವಂತೆ ಮಾಡಿದರು ಎಂದು ಈಗಲೂ ಭಕ್ತರು ಅವರ ಪವಾಡಗಳನ್ನು ಹೇಳುತ್ತಾರೆ.

ಅನೇಕ ಜನರ ದುಃಖ ದುಮ್ಮಾನಗಳನ್ನು, ಕಷ್ಟ ಕೋಟಲೆಗಳನ್ನು ನೀಗಿಸಿದ ಶ್ರೀ ಸಿದ್ದಲಿಂಗ ಮಹಾರಾಜರು ಇದೇ ಕ್ಷೇತ್ರದಲ್ಲಿ 1927 ರ ಭಾದ್ರಪದ ವಧ್ಯ ಸಪ್ತಮಿ ದಿವಸ ಗುರುಪಾದಕ್ಕೆ ತಮ್ಮ ದೇಹವನ್ನು ಸಮರ್ಪಿಸಿದರು. ಶ್ರೀ ಸಿದ್ದಲಿಂಗ ಮಹಾರಾಜರಿಂದ ಸ್ಥಾಪಿತವಾದ ಈ ಮಠವನ್ನು ಈಗ ಶ್ರೀ ವೃಷಭಲಿಂಗ ಮಹಾಶಿವ ಯೋಗಿಗಳು ನಡೆಸ್ತಾ ಇದ್ದು ಈ ಮಠವು ಅನ್ನ ದಾಸೋಹ ಹಾಗೂ ಶಿಕ್ಷಣ ದಾಸೋಹಕ್ಕೆ ಹೆಸರು ವಾಸಿಯಾಗಿದೆ. ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ವಾನ್ನೂ ನಡೆಸಲಾಗುತ್ತದೆ. ಆ ಸಮಯದಲ್ಲಿ ಕರ್ನಾಟಕ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದಲೂ ಭಕ್ತರು ಆಗಮಿಸಿ ಗುರುಗಳ ಆಶೀರ್ವಾದ ಪಡೆಯುತ್ತಾರೆ. ಈ ಪುಣ್ಯ ಕ್ಷೇತ್ರವೂ ವಿಜಯಪುರ ಅಂದರೆ ಬಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಲಾಚ್ಯಾನ ಗ್ರಾಮದಲ್ಲಿದೆ. ಸುಕ್ಷೇತ್ರವು ಬೆಂಗಳೂರಿನಿಂದ 563 ಕಿಮೀ, ಗುಲ್ಬರ್ಗ ದಿಂಡ 127 ಕಿಮೀ, ವಿಜಯಪುರ ದಿಂದ 57 ಕಿಮೀ, ಇಂಡಿ ಇಂದ 13 ಕಿಮೀ ದೂರದಲ್ಲಿದೆ. ಲಚ್ಯಾಣವು ಉತ್ತಮ ಸಾರಿಗೆ ವ್ಯವಸ್ಥೆ ಹೊಂದಿದ್ದು, ಇಂಡಿಯಿಂದ ಬಾಡಿಗೆ ವಾಹನದಲ್ಲಿ ಸುಲಭವಾಗಿ ಈ ಕ್ಷೇತ್ರಕ್ಕೆ ಭೇಟಿ ನೀಡಬಹುದಾಗಿದೆ. ಲಚ್ಯಾಣವು ರೈಲ್ವೇ ಮಾರ್ಗ ಹೊಂದಿದ್ದರೂ ಇಲ್ಲಿ ಯಾವುದೇ ರೈಲು ನಿಲುಗಡೆ ಆಗದ ಕಾರಣ ಈ ಕ್ಷೇತ್ರಕ್ಕೆ ಇಂಡಿ ರೈಲ್ವೇ ನಿಲ್ದಾಣವು ಹತ್ತಿರದ ರೈಲ್ವೇ ನಿಲ್ದಾಣ ಆಗಿದೆ. ಜೀವನದಲ್ಲಿ ಸಮಸ್ಯೆ ಬಂದರೆ ಈ ಪವಾಡ ಪುರುಷರ ದರ್ಶನ ಪಡೆದು ಕೃತಾರ್ಥರಾಗೋಣ. ಶುಭದಿನ.

Leave a Reply

Your email address will not be published. Required fields are marked *