ನಮಸ್ತೆ ಪ್ರಿಯ ಓದುಗರೇ, ತುಳುನಾಡು ಈ ಊರು ವಿಭಿನ್ನವಾದ ಸಂಸ್ಕೃತಿ ವಿಶಿಷ್ಟವಾದ ಆಚರಣೆಗೆ ಹೆಸರುವಾಸಿಯಾಗಿದ್ದು ಗಣೇಶ, ಈಶ್ವರ, ಪಾರ್ವತಿ, ಮಹಾವಿಷ್ಣು, ಸುಬ್ರಮಣ್ಯ ಹೀಗೆ ಅನೇಕ ಬಗೆಯ ದೇವರುಗಳನ್ನು ಭಕ್ತಿಯಿಂದ ಪೂಜಿಸಿಸುವ ಈ ಪ್ರದೇಶದಲ್ಲಿ ಇಂದಿಗೂ ಕೂಡ ಇಲ್ಲಿನ ಜನರು ನಾಗಾರಾಧನೆ, ಭೂತಾರಾಧನೆಯನ್ನ ಬಲವಾಗಿ ನಂಬಿಕೊಂಡು ಬಂದಿದ್ದಾರೆ. ಬನ್ನಿ ಇಂದಿನ ಲೇಖನದಲ್ಲಿ ದುಷ್ಟರನ್ನು ಶಿಕ್ಷಿಸೋ ಕೊರಗಜ್ಜನ ದರ್ಶನ ಮಾಡಿ ಆತನ ಕೃಪೆಗೆ ಪಾತ್ರರಾಗೋಣ. ಕೊರಗಜ್ಜ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಜನಪ್ರಿಯವಾದ ದೈವವಾಗಿದ್ದು, ಧರ್ಮ ಮತ್ತು ಸತ್ಯದ ಪ್ರತೀಕವಾಗಿ ಈ ದೇವನನ್ನು ನಿಷ್ಠೆಯಿಂದ ಪೂಜಿಸಲಾಗುತ್ತದೆ. ಮನೆಯಲ್ಲಿ ಯಾವುದಾದರೂ ವಸ್ತು ಕಳುವಾದರೆ ಸಾಕು ಆ ದೇವನನ್ನು ಮನಸ್ಸಿನಲ್ಲಿ ನೆನೆದು ಕೊರಗಜ್ಜ ಕಳೆದು ಹೋದ ವಸ್ತುಗಳು ಸಿಗುವಂತೆ ಮಾಡು ಅವು ಸಿಕ್ಕರೆ ನಿನಗೆ ಇಷ್ಟವಾದ ವಸ್ತುಗಳನ್ನು ತಂದು ಅರ್ಪಿಸ್ತೀವಿ ಅಂತ ಹರಕೆ ಹೊತ್ತುಕೊಂಡರೆ, ಕಳೆದು ಹೋದ ವಸ್ತುವು ಮತ್ತೆ ಸಿಗುತ್ತವಂತೆ. ಹೀಗಾಗಿ ಇಲ್ಲಿನ ಜನರು ವಸ್ತುಗಳು ಕಳುವಾದ್ರೆ ಪೊಲೀಸ್ ಕಂಪ್ಲೈಂಟ್ ಕೊಡೋ ಮೊದಲು ಅಜ್ಜನಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ. ಆರೋಗ್ಯ ಸಮಸ್ಯೆ, ವ್ಯಾಪಾರ ಸಮಸ್ಯೆ, ಮಾನಸಿಕ ಸಮಸ್ಯೆ ಹೀಗೆ ಯಾವ ಬಗೆಯ ಸಮಸ್ಯೆ ಇದ್ರೂ ಆ ಸಮಸ್ಯೆಗಳಿಗೆ ಕೊರಗಜ್ಜನ ಬಳಿ ಪರಿಹಾರ ಇದೆ. ಈತನಿಗೆ ಪ್ರಿಯವಾದ ವಿಲ್ಯೆದೇಲೆ, ಅಡಿಕೆ , ಸುಣ್ಣ, ತಂಬಾಕು, ಬೀಡಿ, ಸೇಂದಿ, ಚಕ್ಕುಲಿಯನ್ನ ಸಮರ್ಪಿಸ್ಥಿವಿ ಅಂತ ಹರಕೆ ಹೊತ್ತುಕೊಂಡರೆ ಆತ ನಮ್ಮೆಲ್ಲ ಕಷ್ಟಗಳನ್ನು ಕ್ಷಣ ಮಾತ್ರದಲ್ಲಿ ನೀಗಿಸುತ್ತಾನೆ.

ನಾವು ಕಷ್ಟದಲ್ಲಿ ಇರುವಾಗ ಯಾವ ಜಾಗದಲ್ಲಿ ಬೇಕಾದ್ರೂ ನಿಂತು ಭಕ್ತಿಯಿಂದ ಅಜ್ಜ ನೀನೇ ನಮ್ಮನ್ನು ಕಾಪಾಡು ಅಂತ ಪ್ರಾರ್ಥಿಸಿದರೆ ಸಾಕು, ಆತ ನಮ್ಮೆಲ್ಲ ದುಃಖ ದುಮ್ಮಾನಗಳನ್ನು ದೂರ ಮಾಡ್ತಾನೆ ಎಂದು ಹೇಳಲಾಗುತ್ತದೆ. ಹೀಗಾಗಿಯೇ ತುಳುನಾಡಿನ ಪ್ರತಿ ವ್ಯಕ್ತಿಯೂ ಈ ಕೊರಗಜ್ಜನನ್ನು ಭಕ್ತಿಯಿಂದ ಪೂಜಿಸುತ್ತಾರೆ. ಇನ್ನೂ ರಾತ್ರಿ ಸಮಯದಲ್ಲಿ ಕೊರಗಜ್ಜನ ಸನ್ನಿಧಾನದ ಮುಂದೆ ಹೋಗುವಾಗ ಬೆಳಕನ್ನು ಹಚ್ಚಬಾರದು ಎಂಬ ಪ್ರತೀತಿ ಇದೆ. ಒಂದುವೇಳೆ ಬೆಳಕನ್ನು ಹಚ್ಚಿದ್ರೆ ಅವರಿಗೆ ಕೊರಗಜ್ಜ ಶಿಕ್ಷೆಯನ್ನು ನೀಡುತ್ತಾನೆ ಎಂದು ಹೇಳಲಾಗುತ್ತದೆ. ಹೀಗಾಗಿಯೇ ರಾತ್ರಿ ಹೊತ್ತು ಈ ದೇವಾಲಯದ ಮುಂದೆ ಬರುವ ವಾಹನಗಳು ಗಾಡಿಯ ಹೆಡ್ ಲೈಟ್ ಹಾಕದೆ ಬರುವುದು ಕೊರಗಜ್ಜನ ಮಹಿಮೆಯನ್ನು ಎತ್ತಿ ತೋರಿಸುತ್ತದೆ. ಕೊರಗಜ್ಜನ ಆಲಯದ ಬಳಿ ಪ್ರತಿವರ್ಷ ಆಗೆಲು ಸೇವೆ ಮತ್ತು ಕೋಲಾ ಸೇವೆಯನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಕೋಲಾ ಸೇವೆಯನ್ನು ಮಾಡುವ ವ್ಯಕ್ತಿಯು ತಲೆಗೆ ಅಡಿಕೆ ಎಲೆಯಿಂದ ಮಾಡಿದ ಮುಟ್ಟಾಳೆ ಕವಚ ಸೊಂಟಕ್ಕೆ ಗೆಜ್ಜೆಯ ಪಟ್ಟಿ ಮೈತುಂಬ ಕಪ್ಪು ಮಸಿಯನ್ನು ಬಳಿದುಕೊಂಡು ಕೈಯಲ್ಲಿ ಬೆತ್ತವನ್ನು ಹಿಡಿದು ನರ್ತಿಸುತಾನೆ.

ಈ ಸಮಯದಲ್ಲಿ ಸಹಸ್ರಾರು ಮಂದಿ ಕೋಲಾ ಸೇವೆಯಲ್ಲಿ ಭಾಗಿಯಾಗಿ ಪುನೀತರಾಗುತ್ತಾರೆ. ಇನ್ನು ಆಗೆ ಲು ಸೇವೆ ನಡೆಯುವ ಸಂದರ್ಭದಲ್ಲಿ ಕೊರಗಜ್ಜನಿಗೆ ಭಕ್ತಾದಿಗಳು ಹರಕೆ ರೂಪದಲ್ಲಿ ಕುಡು ಬಸಳೆ, ಮೀನಿನ ಪದಾರ್ಥ, ಕೋಳಿಯ ಪದಾರ್ಥ, ಉಪ್ಪಿನಕಾಯಿ ಅರ್ಪಿಸಿ ಆತನ ಆಶೀರ್ವಾದವನ್ನು ಬೇಡುತ್ತಾರೆ. ಸಮಾನತೆಯನ್ನು ಸಾರುವ ಈ ದೈವನಿಗೆ ಜಾತಿ ಮತಗಳ ಬೇಧವಿಲ್ಲ. ಯಾರು ಬೇಕಾದರೂ ಈ ಸನ್ನಿಧಾನಕ್ಕೆ ಬಂದು ಆತನನ್ನು ಪೂಜಿಸಬಹುದು. ಕೊರಗಜ್ಜನ ಮೂಲ ದೇವಸ್ಥಾನವು ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರು ಎಂಬ ಪ್ರದೇಶದಲ್ಲಿದ್ದು, ಈ ದೇವರನ್ನು ಬೆಳಿಗ್ಗೆ 6- ಸಂಜೆ 6 ರ ವರೆಗೆ ದರ್ಶನ ಮಾಡಬಹುದಾಗಿದೆ. ಮಂಗಳೂರಿನ ಬೋಲಾರ್ ನಲ್ಲಿ ನೆಲೆಸಿರುವ ಕೊರಗಜ್ಜನ ದೇವಾಲಯವು ರಾಜಧಾನಿ ಬೆಂಗಳೂರಿನಿಂದ 350 ಕಿಮೀ, ಮೈಸೂರಿನಿಂದ 254 ಕಿಮೀ, ಹುಬ್ಬಳ್ಳಿ ಇಂದ 370 ಕಿಮೀ, ಉಡುಪಿಯಿಂದ 63 ಕಿಮೀ, ಮಂಗಳೂರಿನಿಂದ 11 ಕಿಮೀ ದೂರದಲ್ಲಿದೆ. ಮಂಗಳೂರೀಗೆ ರಾಜ್ಯದ ಎಲ್ಲಾ ಭಾಗಗಳಿಂದಲೂ ಕರ್ನಾಟಕ ಸಾರಿಗೆ ವ್ಯವಸ್ಥೆ ಹೊಂದಿದ್ದು, ಮಂಗಳೂರು ಉತ್ತಮ ರೈಲ್ವೇ ಸಂಪರ್ಕ ಹಾಗೂ ವಿಮಾನ ಸಂಪರ್ಕ ಹೊಂದಿದೆ. ಸಾಧ್ಯವಾದರೆ ನೀವು ಒಮ್ಮೆ ದಕ್ಷಿಣ ಕನ್ನಡ ಜಿಲ್ಲೆಯ ಆರಾಧ್ಯ ದೈವ ಕೋರಗಜ್ಜನ ದರ್ಶನ ಪಡೆದು ಆತನ ಕೃಪೆಗೆ ಪಾತ್ರರಾಗಿ. ಶುಭದಿನ.

Leave a Reply

Your email address will not be published. Required fields are marked *