ನಮಸ್ತೆ ಪ್ರಿಯ ಓದುಗರೇ, ಮಹಾವಿಷ್ಣು ಈ ದೇವ ಎತ್ತದ ಅವತಾರಗಳಿಲ್ಲ ಈ ಭೂಮಿಯ ಮೇಲೆ ಧರ್ಮ ಸಂಸ್ಥಾಪನೆ ಗೋಸ್ಕರ ಬರೋಬ್ಬರಿ ಹತ್ತು ಅವತಾರಗಳನ್ನು ಎತ್ತಿ ಮಾನವ ಕುಲವನ್ನು ಉದ್ಧರಿಸಿದ ಸ್ವಾಮಿ ಇವನು. ಪಡುಗಡಲ ಮೇಲೆ ವಾಸಿಸುವ ಈತ ನೀಲ ವರ್ಣದ ಸುಕೋಮಲ ಶರೀರವನ್ನು ಹೊಂದಿದವನು. ಈತನ ಒಂದೊಂದು ಅವತಾರವು ಒಂದೊಂದು ಸಂದೇಶವನ್ನು ನೀಡುತ್ತೆ. ಬನ್ನಿ ಇವತ್ತಿನ ಲೇಖನದಲ್ಲಿ ಮಹಾವಿಷ್ಣುವು ಕೂರ್ಮಾವತಾರಿಯಾಗಿ ನೆಲೆನಿಂತ ಕರ್ನಾಟಕದ ಏಕೈಕ ಕೂರ್ಮ ದೇವಾಲಯವನ್ನು ದರ್ಶನ ಮಾಡಿ ಪುನೀತರಾಗೊಣ. ಸುತ್ತ ಮುತ್ತ ಕಲ್ಲು ಬಂಡೆಗಳು ಸುಯ್ಯನೆ ಬೀಸುವ ಗಾಳಿ ವಸುಂಧರೆಯ ತಾಪವನ್ನು ಹೆಚ್ಚಿಸೋ ಸೂರ್ಯನ ಬಿಸಿಲು ಇವುಗಳ ನಡುವೆ ತಂಪಗಿನ ಗವಿಯಲ್ಲಿ ಉದ್ಭವ ಮೂರ್ತಿಯಾಗಿ ನೆಲೆ ನಿಂತ ಈ ಗವಿ ರಂಗನಾಥ ಸ್ವಾಮಿ. ಈ ದೇಗುಲವು ಸಾವಿರ ವರ್ಷಗಳ ಪುರಾತನವಾಗಿದ್ದು ದೇವಾಲಯವು ಮೂರ್ನಾಲ್ಕು ಗೋಪುರಗಳನ್ನು ಹೊಂದಿದೆ. ದೇಗುಲದ ಮುಂಭಾಗದಲ್ಲಿ ಗರುಡ ಗಂಭವಿದ್ದು ದೇವಸ್ಥಾನದ ಗರ್ಭಗುಡಿಯು ಸಂಪೂರ್ಣ ಶಿಲಾಮಯವಾಗಿದೆ. ಇನ್ನೂ ಈ ಕ್ಷೇತ್ರದಲ್ಲಿ ನಡೆಯುವ ಹೂವಿನ ಪ್ರಸಾದದ ಪವಾಡ ಮೈ ನವಿರೇಳಿಸುವಂತಿದ್ದು ಭಕ್ತರು ತಮ್ಮ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯ ಸಿದ್ಧಿಸುತ್ತೋ ಇಲ್ಲವೋ ಎಂದು ಪ್ರಶ್ನೆ ಕೇಳಬೇಕು. ನಮ್ಮ ಕಾರ್ಯ ಫಲಿಸುತ್ತೇ ಎಂದರೆ ದೇವರ ಬಲ ಭಾಗದಿಂದ ಹೂವು ಬೀಳುತ್ತೆ, ಅದೇ ನಮ್ಮ ಕಾರ್ಯ ಫಲಿಸೋದಿಲ್ಲ ಎಂದರೆ ದೇವರ ಎಡ ಭಾಗದಿಂದ ಹೂವು ಬೀಳುತ್ತೆ. ಈ ರೋಮಾಂಚನಕಾರಿ ವಿಸ್ಮಯವನ್ನು ಕಣ್ಣು ತುಂಬಿಕೊಳ್ಳಲು ನಿತ್ಯ ನೂರಾರು ಮಂದಿ ದೇಗುಲಕ್ಕೆ ಭೇಟಿ ನೀಡುತ್ತಾರೆ. ಅಲ್ಲದೆ ಇಲ್ಲಿರುವ ದೇವರ ಮೂರ್ತಿಯು ವರ್ಷದಿಂದ ವರ್ಷಕ್ಕೆ ಬೆಳೆಯುತ್ತೆ ಎಂದು ಗವಿರಂಗನಾಥನ ಪವಾಡ ಎಂದೇ ಹೇಳಬಹುದು. ಅಂದಹಾಗೆ ಮಹಾವಿಷ್ಣುವಿನ ದಶಾವತರಗಳಲ್ಲಿ ಕೂರ್ಮಾವತಾರವೂ ಒಂದಾಗಿದ್ದು ಶ್ರೀಮನ್ನಾರಾಯಣನು ಈ ಅವತಾರವನ್ನು ತಾಳುವುದರ ಹಿಂದೆ ಒಂದು ರೋಚಕ ಕಥೆ ಕೂಡ ಇದೆ. ಈ ಕಥೆಗೂ ಗವಿರಂಗನಾಥ ಸ್ವಾಮಿ ನೆಲೆಸಿರುವ ಈ ಕ್ಷೇತ್ರಕ್ಕೂ ಒಂದು ಮಹತ್ತರವಾದ ನಂಟು ಇದೆ.

ಹಿಂದೆ ದೇವ ದಾನವರು ಕೂಡಿ ಅಮೃತ ಮಂತನಕ್ಕೊಸ್ಕರ ಕ್ಷೀರ ಸಾಗರವನ್ನು ಕಡೆಯಲು ಮಂದರ ಪರ್ವತವನ್ನು ಕಡಗೋಲಾಗಿ ಮಾಡಿಕೊಂಡು ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು ಕ್ಷೀರ ಸಾಗರವನ್ನು ಕಡೆಯುತ್ತರೆ. ಆಗ ಪರ್ವತವು ಕುಸಿಯಲು ಆರಂಭಿಸುತ್ತದೆ. ನಂತರ ಮಹಾವಿಷ್ಣುವು ಕೂರ್ಮಾವತಾರಿಯಾಗಿ ಪರ್ವತವನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸಮುದ್ರ ಮಂಥನದ ಕಾರ್ಯ ಸುಸೂತ್ರವಾಗಿ ನಡೆಯಲು ಕಾರಣೀಭೂತನಾಗೀ ಸಮುದ್ರ ಮಂಥನದಲ್ಲಿ ಉದ್ಭವಿಸಿದ ಲಕ್ಷ್ಮಿ ದೇವಿಯನ್ನು ವರಿಸಿ ಮುಂದೆ ಈ ಕ್ಷೇತ್ರದಲ್ಲಿ ಸ್ವಯಂ ಭೂ ಆಗಿ ನೆಲೆಸಿದ ಎಂದು ಇಲ್ಲಿನ ಕ್ಷೇತ್ರ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಕರ್ನಾಟಕದಲ್ಲಿರುವ ಮಹಾವಿಷ್ಣುವಿನ ಏಕೈಕ ಕೂರ್ಮಾವತಾರಿ ದೇವಾಲಯ ಇದಾಗಿದ್ದು. ರಂಗನಾಥ ಸ್ವಾಮಿಯ ಜೊತೆಗೆ ಲಕ್ಷ್ಮಿ ದೇವಿಯು ಕೂಡ ಈ ಕ್ಷೇತ್ರದಲ್ಲಿ ಉದ್ಭವ ಮೂರ್ತಿಯಾಗಿ ನೆಲೆನಿಂತು ಭಕ್ತರ ಅಭೀಷ್ಟೇಗಳನ್ನ ಪೂರೈಸುತ್ತಿದ್ದಾಳೆ. ಇಲ್ಲಿ ರಂಗನಾಥ ಸ್ವಾಮಿ ಹಾಗೂ ಲಕ್ಷ್ಮೀ ದೇವಿ ಮಾತ್ರವಲ್ಲದೆ ಅನಂತಶಯನ ಸ್ವಾಮಿ, ಮಾರುತಿ ಮಂಟಪ, ಶಂಕರ ಲಿಂಗ, ಮಲ್ಲೇಶರ ದೇವಾಲಯ ಕೂಡ ಇದೆ. ಇಲ್ಲಿರುವ ಅನಂತಶಯನ ದೇವರು ಏಳು ಎಡೆ ಗಳುಳ್ಳ ಆದಿಶೇಷನ ಮೇಲೆ ಪವಡಿಸಿದ್ದು ದೇವರ ಪಾದ ತಳದಲ್ಲಿ ಶ್ರೀದೇವಿ ಮತ್ತು ಭೂದೇವಿ ಉಪಸ್ಥಿತರಿದ್ದಾರೆ. ಸಾಮಾನ್ಯವಾಗಿ ಬೇರೆಲ್ಲಾ ದೇಗುಲದಲ್ಲಿ ದೇವರ ಉತ್ಸವ ಮೂರ್ತಿ ದೇವಸ್ಥಾನದ ಒಳಗಡೆ ಇರುವುದನ್ನು ನಾವು ನೋಡಿರ್ಥೀವಿ. ಆದರೆ ಈ ಕ್ಷೇತ್ರದಲ್ಲಿ ದೇವರ ಉತ್ಸವ ಮೂರ್ತಿಗೆಂದೇ ಪ್ರತ್ಯೇಕ ದೇವಸ್ಥಾನವನ್ನು ಕಟ್ಟಲಾಗಿದೆ. ಪ್ರತಿ ವರ್ಷ ಚೈತ್ರ ಮಾಸದ ನಕ್ಷತ್ರದ ದಿನ ಇಲ್ಲಿ ಸ್ವಾಮಿಯ ಬ್ರಹ್ಮ ರಥೋತ್ಸವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಆ ಸಮಯದಲ್ಲಿ ಉತ್ಸವ ಮೂರ್ತಿಯನ್ನು ರಥದ ಮೇಲೆ ಕುಳ್ಳಿರಿಸಿ ದೇಗುಲದ ಸುತ್ತಲೂ ಪ್ರದಕ್ಷಿಣೆ ಹಾಕಲಾಗುತ್ತದೆ. ಇಲ್ಲಿ ನಡೆಯುವ ರಥೋತ್ಸವ ನೋಡಲು ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶದಿಂದಲೂ ಭಕ್ತರು ಆಗಮಿಸುತ್ತಾರೆ.

ಇವಿಷ್ಟೂ ಸಂಗತಿಗಳು ಮಾತ್ರವಲ್ಲದೆ ಹದಿನೈದನೇ ಶತಮಾನದಲ್ಲಿ ಇಲ್ಲಿನ ಗುಹೆಯೊಳಗೆ ಇದ್ದ ದೇವರ ವಿಗ್ರಹವನ್ನ ಗೊಲ್ಲನೊಬ್ಬ ಕಂಡು ಹಿಡಿದ ಎಂದು ಹೇಳಲಾಗುತ್ತದೆ. ಗೊಲ್ಲನು ತನ್ನ ಬಳಿ ಇರುವ ಹಸುಗಳನ್ನು ನಿತ್ಯ ಈ ಸ್ಥಳಕ್ಕೆ ಮೇಯಿಸಲು ಕರೆದುಕೊಂಡು ಬರ್ತಾ ಇದ್ದನಂತೆ. ಆ ಸಂದರ್ಭದಲ್ಲಿ ಒಂದು ಹಸುವೊಂದು ಪ್ರತಿನಿತ್ಯವೂ ಇಲ್ಲಿರುವ ಹುತ್ತಕ್ಕೆ ಹಾಲನ್ನು ಸುರಿಸಿ ಬರ್ತಾ ಇತ್ತು. ಇದನ್ನು ನೋಡಿದ ಗೊಲ್ಲನು ಊರ ಮುಖಂಡರಿಗೆ ಈ ವಿಷಯವನ್ನು ತಿಳಿಸುತ್ತಾನೆ. ಆ ತಕ್ಷಣವೇ ಊರ ಗೌಡರು ಬೂದಿಹಾಳ ಕೋಟೆಯ ಪಾಳೇಗಾರ ರೊಂದಿಗೆ ಈ ಸ್ಥಳಕ್ಕೆ ಆಗಮಿಸಿ ಹುತ್ತವನ್ನು ಹೊಡೆದು ನೋಡ್ತಾರೆ, ಆಗ ಅಲ್ಲಿರುವ ದೇವರ ಮೂರ್ತಿಯನ್ನು ನೋಡಿ ಮುಂದೆ ಪಾಳೆಗಾರರೇ ಈ ದೇವರಿಗೆ ದೇವಸ್ಥಾನವನ್ನು ನಿರ್ಮಾಣ ಮಾಡಿದ್ರು ಎಂದು ಹೇಳಲಾಗುತ್ತದೆ. ಇನ್ನೂ ಈ ಕ್ಷೇತ್ರಕ್ಕೆ ಬಂದು ಯಾರೇ ಏನನ್ನೇ ಬೇಡಿದ್ರೂ ಈ ದೇವ ಇಲ್ಲ ಎನ್ನದೆ ನಮ್ಮೆಲ್ಲ ಕೋರಿಕೆಗಳನ್ನು ಮಾನ್ಯ ಮಾಡ್ತಾನೆ ಎನ್ನುವುದು ಇಲ್ಲಿಗೆ ಭೇಟಿ ನೀಡುವ ಭಕ್ತರ ಅಚಲವಾದ ನಂಬಿಕೆ ಆಗಿದೆ. ಗವಿರಂಗನಾಥ ಸ್ವಾಮಿಯನ್ನು ನಿತ್ಯ ಬೆಳಿಗ್ಗೆ 8.30 ರಿಂದ ಮದ್ಯಾನ 1.30 ರ ವರೆಗೆ, ಸಾಯಂಕಾಲ 3.30 ರಿಂದ 5 ಗಂಟೆ ವರೆಗೆ ಮಾತ್ರ ದರ್ಶನ ಮಾಡಬಹುದು. ಇಲ್ಲಿ ಬರುವ ಭಕ್ತಾದಿಗಳು ದೇವರಿಗೆ ಅಲಂಕಾರ ಸೇವೆ, ಅಭಿಷೇಕ ಸೇವೆ, ತುಳಸಿ ಅರ್ಚನೆ, ಅಷ್ಟೋತ್ತರ ನಾಮಾವಳಿ ಸೇವೆಗಳನ್ನು ಮಾಡಿಸಬಹುದಾಗಿದೆ. ಕೂರ್ಮಾವತಾರಿ ಆದ ಮಹಾವಿಷ್ಣುವು ರಂಗನಾಥ ಸ್ವಾಮಿಯಯಾಗಿ ನೆಲೆ ನಿಂತ ಈ ಕ್ಷೇತ್ರವು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಗವಿರಂಗಾಪುರ ಎನ್ನುವ ಪುಟ್ಟ ಊರಿನಲ್ಲಿದ್ದ ಈ ಕ್ಷೇತ್ರವು ಬೆಂಗಳೂರಿನಿಂದ 180ಕಿಮೀ, ತುಮಕೂರಿನಿಂದ 101 ಕಿಮೀ, ಶಿವಮೊಗ್ಗದಿಂದ 123 ಕಿಮೀ, ದಾವಣಗೆರೆ ಇಂದ 124 ಕಿಮೀ, ಚಿತ್ರದುರ್ಗದಿಂದ 87 ಕಿಮೀ, ಹೊಸದುರ್ಗ ದಿಂದ 24 ಕಿಮೀ ದೂರದಲ್ಲಿದೆ. ಸಾಧ್ಯವಾದರೆ ಈ ಪುಣ್ಯ ಕ್ಷೇತ್ರಕ್ಕೆ ನೀವೂ ನಿಮ್ಮ ಜೀವಮಾನದಲ್ಲಿ ಒಮ್ಮೆ ಭೇಟಿ ಕೊಟ್ಟು ದೇವರ ಅನುಗ್ರಹ ಪಡೆಯಿರಿ. ಶುಭದಿನ.

Leave a Reply

Your email address will not be published. Required fields are marked *