ನಮಸ್ತೆ ಪ್ರಿಯ ಓದುಗರೇ, ರಾಮನ ಬಂಟ ಆಂಜನೇಯ ಸ್ವಾಮಿಯನ್ನು ನಂಬಿದವರನ್ನು ಆತ ಎಂದಿಗೂ ಕೈ ಬಿಡೋದಿಲ್ಲ ಎಂಬ ನಂಬಿಕೆ ಹನುಮ ಭಕ್ತರಲ್ಲಿ ಮನೆ ಮಾಡಿದೆ. ರಘು ಕುಲ ತಿಲನನಿಂದ ಭೂಮಿಯಲ್ಲಿ ಚಿರಂಜೀವಿ ಆಗಿ ನೆಲೆಸು ಎಂದು ವರವನ್ನು ಪಡೆದ ಅಂಜನಿಪುತ್ರನು ಈ ಸ್ಥಳದಲ್ಲಿ ಅಭಯ ಹಸ್ತವನ್ನು ಹಿಡಿದು ತನ್ನ ಬಳಿ ಬರುವ ಭಕ್ತರ ಸಂಕಷ್ಟಗಳನ್ನು ದೂರ ಮಾಡ್ತಾ ಇದ್ದಾನೆ. ಬನ್ನಿ ಇವತ್ತಿನ ಲೇಖನದಲ್ಲಿ ಪುರಾಣ ಪ್ರಸಿದ್ಧವಾದ ಆಂಜನೇಯ ಸ್ವಾಮಿಯ ದೇಗುಲವನ್ನು ದರ್ಶನ ಮಾಡಿ ಕೃತಾರ್ಥರಾಗೊಣ. ತುಂಗಭದ್ರಾ ನದಿಯ ಸುಂದರವಾದ ವಿಹಂಗಮ ಹರಿವಿನ ದಡದಲ್ಲಿ ಆಂಜನೇಯ ಸ್ವಾಮಿಯ ಪುರಾತನವಾದ ದೇಗುಲವಿದ್ದು ಈ ಆಲಯಕ್ಕೆ ಸುಮಾರು ಸಾವಿರ ವರ್ಷಗಳಷ್ಟು ಇತಿಹಾಸ ಇದೆ ಎಂದು ಹೇಳಲಾಗುತ್ತದೆ. ಗೋಪುರ, ಪ್ರದಕ್ಷಿಣಾ ಪಥ, ಗರ್ಭ ಗೃಹವನ್ನು ಒಳಗೊಂಡಿರುವ ಈ ಆಲಯದಲ್ಲಿ ಆಂಜನೇಯ ಸ್ವಾಮಿಯು ಬಲ ಗೈಯಲ್ಲಿ ಅಭಯ ಹಸ್ತ ಎಡ ಕೈಯಲ್ಲಿ ಗದೆಯನ್ನು ಹಿಡಿದು ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ.

ಈ ದೇವನ ಬಳಿ ಬಂದು ಏನನ್ನೇ ಬೇಡಿಕೊಂಡರೂ ಅದು ನೆರವೇರುತ್ತದೆ ಎನ್ನುವುದು ಈ ದೇವರನ್ನು ನಂಬಿರುವ ಭಕ್ತರ ಮನದ ಮಾತಾಗಿದೆ. ಇನ್ನೂ ಇಲ್ಲಿನ ಸ್ಥಳ ಪುರಾಣದ ಪ್ರಕಾರ ಈ ಸ್ಥಳವು ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ದೇವರು ಹಾಗೂ ವಾಯು ದೇವರು ಮೊಟ್ಟ ಮೊದಲು ಭೇಟಿಯಾದ ಜಾಗವಂತೆ. ಈ ಕಾರಣದಿಂದ ಇಲ್ಲಿನ ಮುಖ್ಯ ಪ್ರಾಣ ದೇವರ ವಿಗ್ರಹವನ್ನು ಪಾಂಡವ ವಂಶದ ರಾಜನಾದ ಜರಮೇಜಯ ಪ್ರತಿಷ್ಠಾಪನೆ ಮಾಡಿದರು ಎಂದು ಹೇಳಲಾಗುತ್ತದೆ. ಅಲ್ಲದೆ ಕಾಲ ಕ್ರಮೇಣ ತುಂಗಭದ್ರಾ ನದಿಯಲ್ಲಿ ಮುಳುಗಿ ಹೋಗಿದ್ದ ಸ್ವಾಮಿಯ ವಿಗ್ರಹವನ್ನು ವ್ಯಾಸರಾಯರು ಪುನಃ ಈ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿದರು ಎಂಬ ಮಾತುಗಳು ಈ ಕ್ಷೇತ್ರದ ಕುರಿತಾಗಿ ಕೇಳಿ ಬರುತ್ತವೆ. ಈ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಡಿಸೆಂಬರ್ ತಿಂಗಳಿನಲ್ಲಿ ಸ್ವಾಮಿಯ ಜಾತ್ರಾ ಮಹೋತ್ಸವವನ್ನಾ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ರಥೋತ್ಸವ ನಡೆಯುವಾಗ ಭಕ್ತಾದಿಗಳು ಬಾಳೆ ಹಣ್ಣು ಉತ್ತುತ್ತಿಗಳನ್ನು ಎಸೆದು ತಮ್ಮ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳ್ಳಾರಿ ಮಾತ್ರವಲ್ಲದೆ ಗದಗ ಜಿಲ್ಲೆಯಿಂದಲೂ ಈ ಕ್ಷೇತ್ರದಲ್ಲಿ ನಡೆಯುವ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ಆ ದಿನ ಸರ್ವಾಲಂಕೃತನಾದ ಸ್ವಾಮಿಯನ್ನು ನೋಡುವುದೇ ಬದುಕಿನ ಸೌಭಾಗ್ಯ ಆಗಿದೆ.

ಶ್ರಾವಣ ಮಾಸ ಹಾಗೂ ಶನಿವಾರದಂದು ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ದಿನದ 24 ಗಂಟೆಯೂ ಭಕ್ತರು ಈ ದೇವನನ್ನು ದರ್ಶನ ಮಾಡಬಹುದಾಗಿದ್ದು ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಅರ್ಚನೆ, ಮಂಗಳಾರತಿ, ಹಣ್ಣು ಕಾಯಿ ಸೇವೆಗಳನ್ನು ಮಾಡಿಸಬಹುದಾಗಿದೆ. ಆಂಜನೇಯ ಸ್ವಾಮಿ ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮದಲಗಟ್ಟಿ ಎಂಬ ಊರಿನಲ್ಲಿದೆ. ಈ ದೇಗುಲವು ಬಳ್ಳಾರಿಯಿಂದ 157 ಕಿಮೀ, ಹೂವಿನ ಹಡಗಲಿ ಇಂದ 12 ಕಿಮೀ, ಕೊಟ್ಟೂರಿನ ಕೊಟ್ಟೂರೇಶ್ವರ ದೇಗುಲದಿಂದ 55 ಕಿಮೀ, ಬೆಂಗಳೂರಿನಿಂದ 336 ಕಿಮೀ, ಹುಬ್ಬಳ್ಳಿ ಇಂದ 109 ಕಿಮೀ, ದೂರದಲ್ಲಿದೆ. ಬಳ್ಳಾರಿಯು ಉತ್ತಮವಾದ ರೈಲ್ವೇ ಹಾಗೂ ರಸ್ತೆ ಸಂಪರ್ಕ ಹೊಂದಿದ್ದು, ಹೂವಿನ ಹಡಗಲಿ ಇಂದ ಮದಲಗಟ್ಟಿಗೆ ತಲುಪಲು ಸರ್ಕಾರಿ ಬಸ್ ಸೌಲಭ್ಯ ಕೂಡ ಇದೆ. ಸಾಧ್ಯವಾದರೆ ನೀವು ಕೂಡ ಒಮ್ಮೆ ಪುರಾಣ ಪ್ರಸಿದ್ಧ ಈ ದೇಗುಲಕ್ಕೆ ಭೇಟಿ ನೀಡಿ ಬನ್ನಿ. ಶುಭದಿನ.

Leave a Reply

Your email address will not be published. Required fields are marked *