ನಮಸ್ತೆ ಪ್ರಿಯ ಓದುಗರೇ, ಚಿಕ್ಕಮಗಳೂರು, ಈ ಜಿಲ್ಲೆಯ ಹೆಸರನ್ನು ನೆನಪಾಗೋದು ಹಸಿರು ಹಾಸಿದ ಎತ್ತರದ ಪರ್ವತಗಳು, ಅಲ್ಲಲ್ಲಿ ಹರಿಯುವ ಝರಿಗಳು, ಜಲಪಾತಗಳು ನೊರೆ ನೊರೆಯಾದ ಕಾಫಿಯ ಕಂಪು, ಮರಕ್ಕೆ ತಬ್ಬಿರುವ ಕಾಳು ಮೆಣಸಿನ ಗಿಡಗಳು. ವಾವ್ ಪ್ರಕೃತಿ ಮಾತೆಯೇ ಧರೆಗಿಳಿದು ಬಂದ ಹಾಗೆ ಭಾಸ ಮಾಡುವ ಈ ಜಿಲ್ಲೆಯ ಎದೆಯಾಳದಲ್ಲಿ ಅದೆಷ್ಟೋ ದೇವಾಲಯಗಳು ಹುದುಗಿ ಹೋಗಿವೆ. ಬನ್ನಿ ಇಂದಿನ ಲೇಖನದಲ್ಲಿ ಪ್ರಕೃತಿಯ ರಮಣೀಯತೆಗೆ ನಡುವೆ ನೆಲೆ ನಿಂತು ಭಕ್ತರನ್ನು ಉದ್ಧರಿಸುತ್ತಿರೋ ಸಿಂಹನಗದ್ದೆಯ ಜ್ವಾಲಾಮಾಲಿನಿ ದೇವಿಯ ದರ್ಶನ ಮಾಡಿ ಪುನೀತರಾಗೋಣ. ಸುಮಾರು 600 ವರ್ಷಕ್ಕೂ ಪುರಾತನ ವಾದ ಈ ದೇಗುಲವು ಮೂಲತಃ ಜೈನ ಸಮುದಾಯದವರಿಗೆ ಸೇರಿದ್ದಾಗಿದ್ದು, ಇಂದಿಗೂ ಇಲ್ಲಿ ಜೈನ ತೀರ್ಥಂಕರರೀಗೇ ಪೂಜೆಯನ್ನು ಸಲ್ಲಿಸಲಾಗುತ್ತದೆ. ವಿಶಾಲವಾದ ಕಮಾನನ್ನು ದಾಟಿ ಒಳಗಡೆ ಹೋದ್ರೆ ಸುಂದರವಾದ ಸ್ಥಂಬ ನಮ್ಮನ್ನು ಸ್ವಾಗತಿಸುತ್ತದೆ. ಹೆಂಚಿನ ಛವಣಿಗಳು, ಪುಟ್ಟ ಪುಟ್ಟ ಗುಡಿಗಳು, ದೇಗುಲದ ಪ್ರಾಂಗಣದ ಸುತ್ತಲೂ ಬೇಳೆಸಿರೋ ಹಸಿರು ಉದ್ಯಾನವನ ಮರಗಳು ನಮ್ಮನ್ನು ಬೇರೆ ಲೋಕಕ್ಕೆ ಕೊಂಡೊಯ್ಯತ್ತದೆ. ಕಪ್ಪು ಶಿಲೆಯಲ್ಲಿ ನಿರ್ಮಿತವಾದ ದೇವಿಯು ಅಭಯ ಹಸ್ತವನ್ನು ನೀಡಿ, ತಲೆಯಲ್ಲಿ ವಜ್ರದ ಕಿರೀಟ, ಮೂಗಿನಲ್ಲಿ ಮೂಗುತಿ, ಕೊರಳಲ್ಲಿ ತಾಳಿಯನ್ನು ಹಾಕಿಕೊಂಡು ಸರ್ವಾಲಂಕಾರ ಭೋಷಿತೆ ಆಗಿ ಭಕ್ತರಿಗೆ ತನ್ನ ದಿವ್ಯ ರೂಪವನ್ನು ತೋರುತ್ತಿದ್ದಾಳೆ. ಅತಿಶಯ ಕ್ಷೇತ್ರ ಎಂದೇ ಕರೆಯಲ್ಪಡುವ ಈ ಕ್ಷೇತ್ರದಲ್ಲಿ ಭಕ್ತರು ದೇವಿಯ ಬಳಿ ನೇರವಾಗಿ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯಬಹುದು. ನಮ್ಮ ಮನಸಿನ ಪ್ರೇಶೇನಗಳನ್ನು ದೇವಿಯ ಮುಂದೆ ನಿಂತು ಭಕ್ತಿಯಿಂದ ಕೇಳಿಕೊಳ್ಳಬೇಕು, ಆಗ ನಮ್ಮ ಕೆಲಸ ಆಗುವುದಿದ್ದರೆ ದೇವಿಯು ತಕ್ಷಣ ತನ್ನ ಬಲ ಭಾಗದಿಂದ ಹೂವನ್ನು ಬೀಳಿಸುತ್ತಾಳೆ. ಅದೇ ನಮ್ಮ ಕೋರಿಕೆ ಫಲಿಸೋದಿಲ್ಲ ಎಂದಾದ್ರೆ ದೇವಿಯ ಎಡ ಭಾಗದಿಂದ ಹೂವು ಬೀಳುತ್ತೆ. ಹೀಗಾಗಿ ನಿತ್ಯ ನೂರಾರು ಮಂದಿ ಇಲ್ಲಿಗೆ ಭೇಟಿ ನೀಡಿ ದೇವಿಯ ಬಳಿ ಹೂವಿನ ಪ್ರಸಾದವನ್ನು ಕೇಳಿ ಧನ್ಯರಾಗುತ್ತರೆ.

ಇನ್ನೂ ಈ ಕ್ಷೇತ್ರದಲ್ಲಿ ಜ್ವಾಲಾ ಮಾಲಿನಿಯ ಜೊತೆ ಶಾಂತಿನಾಥ ಸ್ವಾಮಿ ಬಸದಿ, ಪಾರ್ಶ್ವ ನಾಥ ಬಸದಿ, ಬ್ರಹ್ಮ ದೇವರ ಸನ್ನಿಧಿ, ಬಾಹುಬಲಿ ಸ್ವಾಮಿ ಬಸದಿ, ಚಂದ್ರನಾಥ ಸ್ವಾಮಿ ಬಸದಿಗಳು ಇವೆ. ಕಪ್ಪು ಶಿಲೆಯ ಶಾಂತಿನಾಥ ಸ್ವಾಮಿಯ ಮೂರ್ತಿ ಮೂರು ಅಡಿ ಎತ್ತರವಿದ್ದು ಈ ಮೂರ್ತಿಯು ಸುಮಾರು 1001 ವ ಪುರಾತನವಾ ಗಿದೆ. ಜೈನರು ಮಾತ್ರವಲ್ಲದೆ ಹಿಂದೂಗಳು ಕೂಡ ಈ ದಿವ್ಯ ಸ್ಥಳಕ್ಕೆ ಆಗಮಿಸಿ ದೇವರ ಆಶೀರ್ವಾದವನ್ನು ಪಡೆಯುತ್ತಿದ್ದಾರೆ. ಶಿವಮೊಗ್ಗ ಮೂಲದ ಗೇರುಸೊಪ್ಪದವಳಾದ ಜ್ವಾಲಮಾಲಿನಿ ಈ ಕ್ಷೇತ್ರಕ್ಕೆ ಬಂದು ನೆಲೆ ನಿಂತಿದ್ದರ ಹಿಂದೆ ಒಂದು ಸ್ವಾರಸ್ಯಕರ ಘಟನೆ ಕೂಡ ಇದೆ. ಹಿಂದೆ ಗೇರುಸೊಪ್ಪ ಕ್ಷೇತ್ರದಲ್ಲಿ ಶ್ರೀ ಸುಮಂತ ಭದ್ರ ಸ್ವಾಮೀಜಿ ಅವರು ಇದ್ದು, ಇವರು ಜ್ವಾಲಮಾಲಿನಿ ದೇವಿಯ ಆರಾಧಕರು ಆಗಿದ್ದರು. ಇಂದಿನ ಪ್ರಕೃತಿ ದೋಷದಿಂದಾಗಿ ದೇವಿಯನ್ನು ಗೇರುಸೊಪ್ಪದಿಂದ ಬೇರೆ ಕಡೆ ವರ್ಗಾಯಿಸಬೇಕಾದ ಅನಿವಾರ್ಯತೆ ಉಂಟಾಯಿತು. ಆಗ ಯಾವ ಸ್ಥಳಕ್ಕೆ ದೇವಿಯನ್ನು ಸ್ಥಳಾಂತರಿಸಬೇಕು ಎಂದು ಸ್ವಾಮೀಜಿಯವರು ಚಿಂತಿಸುತ್ತಾ ಇದ್ದಾಗ, ದೇವಿಯು ಅವರ ಕನಸಿನಲ್ಲಿ ಬಂದು ಈ ಕ್ಷೇತ್ರವು ಕ್ಷೀಣವಾಗುತ್ತಿರುವುದರಿಂದ ನನ್ನನ್ನು ಎತ್ತಿನ ಬಂಡಿಯಲ್ಲಿ ಕೂರಿಸಿಕೊಂಡು ಹೋಗು, ಹೋಗುತ್ತಿರುವಾಗ ಯಾವ ಸ್ಥಳದಲ್ಲಿ ಬದ್ದ ವೈರಿಗಳಾದ ಸಿಂಹ ಮತ್ತು ದನಗಳು ತಮ್ಮ ಸಹಜ ವೈರತ್ವವನ್ನು ಬಿಟ್ಟು ಅನ್ಯೋನ್ಯತೆಯಿಂದ ಇರುತ್ತವೊ ಅಲ್ಲಿಯೇ ನನ್ನನ್ನ ಪ್ರತಿಷ್ಠಾಪಿಸಿ ಎಂದು ಹೇಳಿದಳಂತೆ. ಹೀಗೆ ಬಂಡಿಯಲ್ಲಿ ಬರುವಾಗ ಒಂದು ಗದ್ದೆಯಲ್ಲಿ ಸಿಂಹ ಹಾಗೂ ದನಗಳು ಒಟ್ಟಿಗೆ ಆಟ ಆಡ್ತಾ ಇದ್ದವಂತೆ ಹೀಗಾಗಿ ಮುಂದೆ ಈ ಸ್ವಾಮೀಜಿ ಅವರು ದೇವಿಯನ್ನು ಪ್ರತಿಷ್ಠಾಪನೆ ಮಾಡಿದ್ರು. ಮುಂದೆ ಈ ಸ್ಥಳವು ಜನರ ಬಾಯಿಂದ ಬಾಯಿಗೆ ಹರಿದಾಡಿ ಸಿಂಹನಗದ್ದೆ ಎಂದು ಖ್ಯಾತವಾಯಿತು ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಈ ದೇಗುಲದಲ್ಲಿ ಜನಂಧರ ಮಂದಿರ ಎನ್ನುವ ಆಕರ್ಷಣೀಯ ಮಂದಿರವಿದ್ದು ಕಲ್ಲು ಹಾಸಿನ ಕೆರೆ ನಿರ್ಮಾಣ ಮಾಡಿ ಅದರೊಳಗೆ ನಾಲ್ಕು ಕಾಲಿನ ಕಂಬಗಳನ್ನು ಇಟ್ಟು ಅದರ ಮೇಲೆ ಶೀಲಾ ಮಯವಾದ ದೇಗುಲವನ್ನು ನಿರ್ಮಿಸಲಾಗಿದೆ. ಇಂತಹ ಸುಂದರ ಜಲಂಧರ ಮಂದಿರವನ್ನು ನಾವು ಬೇರೆಲ್ಲೂ ನೋಡುವುದಕ್ಕೆ ಸಾಧ್ಯವಿಲ್ಲ ಎಂದೇ ಹೇಳಬಹುದು.

ಇವಿಷ್ಟೂ ಮಾತ್ರವಲ್ಲದೆ ನವರಾತ್ರಿ ಸಂದರ್ಭದಲ್ಲಿ ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತಿದ್ದು, ಈ ಸಮಯದಲ್ಲಿ ನವ ವಿಧ ಶೋಭಿತೆ ಆಭರಣಾಲಂಕೃತೆಯಾಗಿ ದೇವಿಯು ಅಷ್ಟಾಭುಜಾನ್ವಿತೆ ಆಗಿ, ಮಹಿಷರೂಢ ಶೋಭಿತ ಆಗಿ, ಸಿದ್ಧಿ ಅಭಯ ಹಸ್ತ ಶೋಭಿತ ಆಗಿ, ಸಮಸ್ತ ಜನಮನ ಫಲಭಿಷ್ಟ ಶೋಭಿತೇ ಆಗಿ ಭಕ್ತರಿಗೆ ದರ್ಶನ ನೀಡ್ತಾರೆ. ನವರಾತ್ರಿಯ ಕೊನೆಯ ದಿನ ರಾಜಬೀದಿಯಲ್ಲಿ ಉತ್ಸವವನ್ನು ಅದ್ಧೂರಿಯಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ, ಆಂಧ್ರ ಪ್ರದೇಶ, ಕೇರಳ ಮುಂತಾದ ರಾಜ್ಯಗಳಿಂದ ಜನರು ಬಂದು ದೇವಿಯ ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ನಿತ್ಯ ತ್ರಿಕಾಲ ಪೂಜೆಯನ್ನು ದೇವಿಗೆ ಮಾಡಲಾಗುತ್ತಿದ್ದು, ಇಲ್ಲಿರುವ ಚಂದ್ರನಾಥ ಸ್ವಾಮಿ ಮೂರ್ತಿಗೂ ನಿತ್ಯ ಪೂಜೆ ಮಾಡಲಾಗುತ್ತದೆ. ಈ ಕ್ಷೇತ್ರಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ಪ್ರತಿನಿತ್ಯ ಉಪಹಾರ ಮತ್ತು ಮಧ್ಯಾನ ಸಂಜೆ ಸಮಯ ಭೋಜನದ ವ್ಯವಸ್ಥೆ ಇರುತ್ತದೆ. ಬೆಳಿಗ್ಗೆ 8.30-9.30 ರ ವರೆಗೆ ಉಪಹಾರ ಮಧ್ಯಾನ 12.30-3 ಗಂಟೆ ವರೆಗೆ ಅನ್ನ ದಾಸೋಹ ಹಾಗೂ ಸಂಜೆ 5.30-6.30 ರ ವರೆಗೆ ಇಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ. ಸರ್ವಾಲಂಕಾರ ಭೋಷಿತೆಯಾಗಿ ಇರೋ ದೇವಿಯನ್ನು ಬೆಳಿಗ್ಗೆ 5 ಗಂಟೆಯಿಂದ ಮಧ್ಯಾನ 1 ಗಂಟೆ ವರೆಗೆ, ಸಾಯಂಕಾಲ 4- ರಾತ್ರಿ 8 ಗಂಟೆ ವರೆಗೆ ದರ್ಶನ ಮಾಡಬಹುದಾಗಿದೆ. ದೇವಿಯ ಈ ದಿವ್ಯ ದೇಗುಲ ಚಿಕ್ಕಮಗಳೂರು ಜಿಲ್ಲೆಯ ಸಿಂಹನಗದ್ದೆಯ ನರಸಿಂಹರಾಜಪುರ ಎಂಬ ಪ್ರದೇಶದಲ್ಲಿದ್ದು. ಈ ದೇವಸ್ಥಾನವು ಬೆಂಗಳೂರಿಂದ 330 ಕಿಮೀ, ಉಡುಪಿಯಿಂದ 112 ಕಿಮೀ, ಹಾಸನದಿಂದ 138 ಕಿಮೀ, ಚಿಕ್ಕಮಗಳೂರಿನಿಂದ 85 ಕಿಮೀ, ಬೈಂದೂರಿ ನಿಂದ 150 ಕಿಮೀ, ಶಿವಮೊಗ್ಗದಿಂದ 56 ಕಿಮೀ, ಭದ್ರಾವತಿ ಇಂದ 51 ಕಿಮೀ, ಬೀರೋರಿನಿಂದ 95 ಕಿಮೀ, ನರಸಿಂಹರಾಜಪುರ ದಿಂದ 1 ಕಿಮೀ ದೂರದಲ್ಲಿದೆ. ಚಿಕ್ಕಮಗಳೂರು, ಶಿವಮೊಗ್ಗದಿಂದ ನರಸಿಂಹರಾಜಪುರ ಕ್ಕ ಕರ್ನಾಟಕ ಬಸ್ ಸಾರಿಗೆ ಸೌಲಭ್ಯವಿದೆ. ಈ ಕ್ಷೇತ್ರಕ್ಕೆ ಶಿವಮೊಗ್ಗ ಹಾಗೂ ಭದ್ರಾವತಿಯು ಹತ್ತಿರದ ರೈಲ್ವೇ ನಿಲ್ದಾಣ ಆಗಿದೆ. ಇನ್ನೂ ಈ ಕ್ಷೇತ್ರದ ಬಗ್ಗೆ ಅನ್ಯ ಕ್ಷೇತ್ರ ಕೃತಂ ಪಾಪಂ, ಪುಣ್ಯ ಕ್ಷೇತ್ರ ವಿನಷ್ಯತೆ. ಪುಣ್ಯ ಕ್ಷೇತ್ರ ಕೃತಂ ಪಾಪಂ, ವಜ್ರ ಲೇಪೋ ವಿನಷ್ಯತಿ. ಎನ್ನುವ ಶ್ಲೋಕವನ್ನು ಸ್ತುತಿಸುತ್ತಾ ಸಾಧ್ಯವಾದರೆ ನೀವು ಒಮ್ಮೆ ಈ ದೇಗುಲವನ್ನು ದರ್ಶನ ಮಾಡಿ ಪಾವಾನರಾಗಿ. ಶುಭದಿನ.

Leave a Reply

Your email address will not be published. Required fields are marked *