ನಮಸ್ತೆ ಪ್ರಿಯ ಓದುಗರೇ, ಭಕ್ತ ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಉಗ್ರರೂಪ ತಾಳಿದ ಸೌಮ್ಯನೊಬ್ಬನೀತ. ಇವನನ್ನು ಭಕ್ತಿಯಿಂದ ನೆನೆದವರನ್ನು ಮತ್ತು ಭಕ್ತಿಯಿಂದ ನಂಬಿದವರನ್ನು ಕಾಪಾಡ್ತ ಇದ್ದಾನೆ ಈ ನರಸಿಂಹ ಸ್ವಾಮಿ. ಸಾಲಿಗ್ರಾಮ ಕ್ಷೇತ್ರದಲ್ಲಿರುವ ಎಲ್ಲಾ ಮನೆಯ ಆರಾಧ್ಯ ದೈವನಾಗೀ, ಗುರುವಾಗಿ ಭಕ್ತರನ್ನು ಸಲಹುತ್ತಿರುವಾ ಈ ದೇವರ ಮಹಿಮೆ ಆಪಾರ. ಬನ್ನಿ ಇವತ್ತಿನ ಲೇಖನದಲ್ಲಿ ಶ್ರೀ ಗುರು ನರಸಿಂಹನ ಬಗ್ಗೆ ಹಲವಾರು ವಿಷಯಗಳನ್ನು ತಿಳಿಯೋಣ. ಲಕ್ಷ್ಮಿ ವಲ್ಲಭಮ್ ಅನಾಥರಕ್ಷಕಮ್ ಅಸುರಸಂಹಾರಂ ಭಕ್ತಪರಾಧೀನಮ್ ಸರ್ವಭಯ ನಿವಾರಕಂ ಸರ್ವರಿಷ್ಟ ನಿವಾರಕಂ ನರಸಿಂಹ ಪ್ರಣಮ್ಯಾಹಮ್. ಹೀಗೆ ಯಾವುದೇ ಹೆಸರಿನಿಂದ ಈ ದೇವರನ್ನು ಕರೆದರೂ ಸಾಕು ಆತ ನಮ್ಮ ಕಷ್ಟಗಳಿಗೆ ದನಿ ಆಗ್ತಾನೆ. ಸಾವಿರಾರು ವರ್ಷಗಳ ಪುರಾತನವಾದ ಈ ದೇವಸ್ಥಾನವನ್ನು ಕದಂಬ ವಂಶದ ಮಯೂರ ವರ್ಮನ ಮೊಮ್ಮಗ ಲೋಕಾದಿತ್ಯ ಕಟ್ಟಿಸಿದನೆಂದು ಹೇಳಲಾಗಿದೆ. ಇಲ್ಲಿರುವ ಶಂಖ ತೀರ್ಥದಲ್ಲಿ ಮಿಂದೆದ್ದರೆ ಎಲ್ಲಾ ಜನ್ಮಗಳ ಪಾಪಗಳು ದೂರವಾಗುತ್ತವೆ. ಮತ್ತು ಇಲ್ಲಿನ ಚಕ್ರ ತೀರ್ಥದಲ್ಲಿ ಮಿಂದೇದ್ದರೆ ಗುರು ನರಸಿಂಹ ಸ್ವಾಮಿಯ ದರ್ಶನ ಮಾಡಿದ್ರೆ ಮನಸ್ಸಿನ ಎಲ್ಲಾ ಆಸೆಗಳು ಈಡೇರಲಿವೆ ಜೊತೆಗೆ ಶತ್ರುಗಳ ಭಾದೆ ಕೂಡ ನಿವಾರಣೆ ಆಗುತ್ತದೆ. ಇಷ್ಟು ಮಾತ್ರವಲ್ಲ ಈ ದೇವಸ್ಥಾನಕ್ಕೆ ಬಂದು ಎಣ್ಣೆಯನ್ನು ಸಮರ್ಪಣೆ ಮಾಡುವುದರಿಂದ ಗ್ರಹಚಾರ ದೋಷಗಳು ನಿವಾರಣೆ ಆಗುತ್ತವೆ.

ಸಾಲಿಗ್ರಾಮ ಕಲ್ಲಿನಲ್ಲಿ ಕೆತ್ತಿರುವ ಶ್ರೀ ಗುರು ನರಸಿಂಹ ಸ್ವಾಮಿಯು ಎಡ ಕೈಯಲ್ಲಿ ಶಂಖವನ್ನು ಬಲಗೈಯಲ್ಲಿ ಚಕ್ರವನ್ನು ಹಿಡಿದು ಯೋಗಮುದ್ರೆಯಲ್ಲಿ ನಿಂತಿದ್ದಾನೆ. ಇನ್ನೂ ಪದ್ಮಪುರಾಣದ ಪುಷ್ಕರ ಖಂಡ ಅಧ್ಯಾಯದಲ್ಲಿ ಈ ಕ್ಷೇತ್ರದ ಮಹಿಮೆ ಕುರಿತು ಉಲ್ಲೇಖಿಸಲಾಗಿದೆ. ಪುರಾಣದ ಪ್ರಕಾರ ನಾರದ ಮುನಿಗಳು ದೇವರ ನಾಮ ಸ್ಮರಣೆ ಮಾಡುತ್ತಾ ಲೋಕ ಸಂಚಾರ ಮಾಡುವಾಗ ಪ್ರಕೃತಿಯಲ್ಲಿ ಅಲ್ಲೋಲ ಕಲ್ಲೋಲ ಆಗುತ್ತೆ ಆಗ ನರಸಿಂಹ ದೇವರು ಶಂಖ ಚಕ್ರಗಳ ಮಧ್ಯೆ ಹುದುಗಿರುವ ನನ್ನನ್ನು ತಂದು ಈ ಸಾಲಿಗ್ರಾಮದಲ್ಲಿ ಪ್ರತಿಷ್ಠಾಪಿಸು ಎಲ್ಲವೂ ಸರಿಯಾಗುತ್ತದೆ ಎಂದು ಹೇಳಲಾಗಿ, ನಾರದ ಮುನಿಗಳು ಈ ಕಪ್ಪು ಶಿಲೆಯಲ್ಲಿ ಇರುವ ಶ್ರೀ ನರಸಿಂಹ ಸ್ವಾಮಿಯನ್ನ ಈ ಪುಣ್ಯ ಭೂಮಿಯಲ್ಲಿ ಸ್ಥಾಪನೆ ಮಾಡಿದರು ಎಂದು ಹೇಳಲಾಗುತ್ತದೆ. ಹಾಗಾಗಿ ಯಾರು ಈ ದೇವರನ್ನು ಅತ್ಯಂತ ಭಕ್ತಿಯಿಂದ ಆರಾಧಿಸುತ್ತಾರೆ ಅವ್ರ ಕಷ್ಟಗಳನ್ನು ನಿವಾರಣೆ ಮಾಡ್ತಾನೆ ಇಲ್ಲಿ ನೆಲೆನಿಂತ ಶ್ರೀ ಗುರು ನರಸಿಂಹ ಸ್ವಾಮಿ. ಈ ದೇವಸ್ಥಾನದಲ್ಲಿ ಕೇವಲ ನರಸಿಂಹ ಸ್ವಾಮಿ ಮಾತ್ರವಲ್ಲ, ಆಂಜನೇಯ, ಗಣೇಶ, ದುರ್ಗಾ ದೇವಿಯ ನ್ನ ಸಹ ನಾವು ದರ್ಶನ ಮಾಡಬಹುದಾಗಿದೆ. ಇನ್ನೂ ಇಲ್ಲಿ ಹನುಮಂತನ ವಿಗ್ರಹ ಸ್ಥಾಪನೆ ಮಾಡುವುದರ ಹಿಂದೆ ಒಂದು ಜಾನಪದ ಕಥೆ ಕೂಡ ಇದೆ. ಹಿಂದೆ ಇಲ್ಲಿನ ನರಸಿಂಹ ದೇವರು ಉಗ್ರ ಸ್ವರೂಪವನ್ನು ಹೊಂದಿ ಪೂರ್ವಾಭಿಮುಖವಾಗಿ ಮುಖ ಮಾಡಿದ್ದು ದೇವಸ್ಥಾನದ ಹತ್ತಿರದ ಗದ್ದೆಗಳಲ್ಲಿ ಬೆಳೆದ ಬೆಳೆ ಭಸ್ಮವಾಗಿತ್ತು. ಇದರಿಂದ ಕುಪಿತನಾದ ವ್ಯಕ್ತಿಯೊಬ್ಬ ಹಾರೆಯಿಂದ ನರಸಿಂಹ ವಿಗ್ರಹವನ್ನು ಹಾನಿ ಮಾಡ್ತಾನೆ. ಇದನ್ನು ತಿಳಿದ ಗ್ರಾಮದವರು ವಿಪ್ರರ ಮುಖೇನ ನರಸಿಂಹ ಮೂರ್ತಿಯನ್ನು ಪಶ್ಚಿಮ ದಿಕ್ಕಿಗೆ ತಿರುಗಿಸುತ್ತಾರೆ. ಜೊತೆಗೆ ದೇವರ ಉರಿಯನ್ನು ತಡೆಯಲು ಸ್ವಾಮಿಯ ಎದುರುಗಡೆ ಆಂಜನೇಯ ಸ್ವಾಮಿಯನ್ನ ಪ್ರತಿಷ್ಠಾಪನೆ ಮಾಡ್ತಾರೆ. ಹೀಗಾಗಿ ನರಸಿಂಹನ ಕೋಪದ ಉರಿಯಿಂದ ಆಂಜನೇಯನಿಂದ ತಂಪಾಗಿ ಇಡುವುದರ ಕಾರಣಕ್ಕೆ ನಿತ್ಯ ಸಿಂಧೂರ ಮತ್ತು ಬೆಣ್ಣೆಯನ್ನು ಲೇಪಿಸುತ್ತಾರೆ. ಶನಿವಾರದಂಡು ಸಾವಿರಾರು ಭಕ್ತರು ಈ ವಾಯೂಪುತ್ರನನ್ನು ದರ್ಶನ ಮಾಡಿ ಪುನೀರಾಗುತ್ತಾ ಇದ್ದಾರೆ.

ಅತ್ಯಂತ ಶಕ್ತಶಾಲಿ ಆದ ನರಸಿಂಹ ಸ್ವಾಮಿಯನ್ನು ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಹಾಗೂ ಸಂಜೆ 5 ರಿಂದ ರಾತ್ರಿ 8 ರ ವರೆಗೆ ದರ್ಶನ ಮಾಡಬಹುದು. ಪ್ರತಿವರ್ಷ ಮಕರ ಸಂಕ್ರಾಂತಿಯ ದಿನದಂದು ಸಾಲಿಗ್ರಾಮದ ಜಾತ್ರೆ ನಡೆಯುತ್ತದೆ. ನರಸಿಂಹ ಜಯಂತಿ, ಆಂಜನೇಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಇಲ್ಲಿಗೆ ಬರುವ ಭಕ್ತರು ದೇವರಿಗೆ ಬ್ರಹ್ಮ ರಥೋತ್ಸವ , ಕ್ಷೀರಾಭಿಷೇಕ, ಹಾಲು ಪರಮಾನ್ನ ಸೇವೆ, ಚಂದ್ರ ಬೆಣ್ಣೆ ಸಮರ್ಪಣೆ, ಪೂರ್ಣಲಂಕಾರ ಸೇವೆಯನ್ನು ಮಾಡಿಸಬಹುದು. ಉಡುಪಿ ಸಮೀಪದ ಸಾಲಿಗ್ರಾಮದಲ್ಲಿರುವ ಈ ಪುಣ್ಯ ಕ್ಷೇತ್ರ ಉಡುಪಿಯಿಂದ 25 ಕಿಮೀ, ಮಂಗಳೂರಿನಿಂದ 79 ಕಿಮೀ, ಕುಂದಾಪುರದಿಂದ 15 ಕಿಮೀ, ಬೆಂಗಳೂರಿನಿಂದ 405 ಕಿಮೀ, ಶಿವಮೊಗ್ಗದಿಂದ 150 ಕಿಮೀ ದೂರದಲ್ಲಿದೆ. ಕರ್ನಾಟಕ ಸಾರಿಗೆ ಬಸ್ಸ್ ಮೂಲಕ ಉಡುಪಿ ತಲುಪಿ ಅಲ್ಲಿಂದ ಸಾಲಿಗ್ರಾಮಕ್ಕೆ ಬಂದರೆ ಶ್ರೀ ಗುರು ನರಸಿಂಹನ ದರ್ಶನ ಮಾಡಬಹುದು. ಉಡುಪಿ ಮತ್ತು ಕುಂದಾಪುರವು ಈ ಗ್ರಾಮಕ್ಕೆ ಹತ್ತಿರದ ರೈಲ್ವೇ ನಿಲ್ದಾಣ ಗಳು ಆಗಿದ್ದು, ಸಾಧ್ಯವಾದರೆ ನೀವು ಒಮ್ಮೆ ಈ ಪರಮಾತ್ಮನ ಸಾನಿಧ್ಯಕ್ಕೆ ಭೇಟಿ ನೀಡಿ ಆ ಪರಮಾತ್ಮನ ಧ್ಯಾನಿಸಿ ಪುನೀತರಾಗಿ. ಶುಭದಿನ.

Leave a Reply

Your email address will not be published. Required fields are marked *