ಬೀದರ್ ನಗರದ ಹೊರವಲಯದಲ್ಲಿರುವ ಝರಣಿ ನರಸಿಂಹ ಗುಹಾಂತರ ಮಂದಿರ ಶ್ರದ್ಧೆ, ಭಕ್ತಿ ಮತ್ತು ವಿಶ್ವಾಸದ ಸಂಗಮವಾಗಿದೆ. ಬಲು ಅಪರೂಪದ ದೇವಸ್ಥಾನ ಕೂಡ ಇದು ಹೌದು. ಮಬ್ಬು ಕತ್ತಲಿನ ಗುಹೆಯಲ್ಲಿ ಸದಾ ಹರಿಯುವ ನೀರಿನಲ್ಲಿ ಸುಮಾರು 300 ಅಡಿಗಳಷ್ಟು ದೂರವನ್ನು ಕಾಲ್ನಡಿಯೊಂದಿಗೆ ಕ್ರಮಿಸಿ ಶ್ರೀ ನರಸಿಂಹ ಸ್ವಾಮಿಯ ದರ್ಶನ ಪಡೆಯುವುದು.

ಈ ಕ್ಷೇತ್ರದ ಪೌರಾಣಿಕ ಕಥೆ: ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ನರಸಿಂಹಾವತಾವೂ ಒಂದು. ನರಸಿಂಹಾವತಾರವನ್ನು ವಿಷ್ಣುವಿನ ನಾಲ್ಕನೆಯ ಅವತಾರ ಎಂಬುದಾಗಿ ಹೇಳಲಾಗುತ್ತದೆ. ತ್ರೇತಾಯುಗದಲ್ಲಿ ಮಣಿಮಂದಾಸುರ ಮತ್ತು ಝಾರಾಸುರ ಎಂಬ ಇಬ್ಬರು ರಾಕ್ಷಸರು ಈ ಕ್ಷೇತ್ರಕ್ಕೆ ಬರುತ್ತಾರೆ. ಆ ಸಮಯದಲ್ಲಿ ಒಂದೆಡೆ ಹಿರಣ್ಯ ಕಶ್ಯಪುವಿನ ಸಂಹಾರದ ನಂತರ ನರಸಿಂಹ ಸ್ವಾಮಿ ಈ ಇಬ್ಬರು ರಾಕ್ಷಸರನ್ನು ಸಂಹರಿಸಲು ಬರುತ್ತಾನೆ. ಆಗ ಇವರಲ್ಲಿ ಝಾರಾಸುರ ಎಂಬ ರಾಕ್ಷಸ ಈ ಕ್ಷೇತ್ರದಲ್ಲಿ ಇರುವಂಥ ಒಂದು ಗುಹೆಯಲ್ಲಿ ಶಿವನನ್ನು ಪ್ರತಿಷ್ಠಾಪಿಸಿ ಪೂಜೆ ಮತ್ತು ತಪ್ಪಸ್ಸನ್ನು ಮಾಡುತ್ತಿರುತ್ತಾನೆ.

ಇತ್ತ ಇವರನ್ನು ಸಂಹರಿಸಲು ಬಂಡ ನರಸಿಂಹ ಇವನ ಶಿವನ ಭಕ್ತಿಯನ್ನು ಕಂಡು ಇವನಿಗೆ ಒಂದು ವರವನ್ನು ಕೊಡಲು ಮುಂದಾಗುತ್ತಾನೆ. ಝಾರಾಸುರ ನರಸಿಂಹನಲ್ಲಿ ನೀನು ನನ್ನನು ಸಂಹರಿಸಿದ ನಂತರ ನೀನು ಇದೆ ಜಾಗದಲ್ಲಿ ನೆಲೆಸಬೇಕು ಮತ್ತು ಈ ಸ್ಥಳವು ನನ್ನ ಹೆಸರಿನಿಂದ ಲೋಕ ಪ್ರಸಿದ್ಧಿಯಾಗಬೇಕೆಂದು ಕೇಳಿಕೊಳ್ಳುತ್ತಾನೆ. ಹಾಗಾಗಾಗಿ ಇಲ್ಲಿ ನರಸಿಂಹ ನೀರಿನಲ್ಲಿ ನೆಲೆಸಿರುತ್ತಾನೆ. ಈ ಕಾರಣದಿಂದಲೇ ಈ ಕ್ಷೇತ್ರವನ್ನು ಝರಣಿ ನರಸಿಂಹ ದೇವಸ್ಥಾನ ಎಂದು ಹೆಸರುವಾಸಿಯಾಯಿತು.

ಈ ದೇವಸ್ಥಾನದ ಇನ್ನೊಂದು ವೈಶಿಷ್ಠ್ಯ. ಝರಣಿ ಎಂದರೆ ನೀರಿನ ಸೆಲೆ ಎಂದರ್ಥ. ಗುಹೆಯ ಒಳಗಡೆ ನೀರಿನ ಸೆಲೆಯೊಂದಿಗೆ ನಡೆದು ದೇವರ ದರ್ಶನ ಮಾಡಬೇಕಾದುದರಿಂದಲೇ ಗುಡಿಗೆ ಝರಣಿ ನರಸಿಂಹ ದೇವಾಲಯ ಎಂಬ ಹೆಸರು ಬಂದಿದೆ ಎಂಬ ಪ್ರತೀತಿ ಉಂಟು. ಎದೆ ಮಟ್ಟದ ಮತ್ತು ಉಗುರು ಬೆಚ್ಚಗಿನ ನೀರಿನಲ್ಲಿ ನಡೆದು ಶ್ರೀ ನರಸಿಂಹ ಸ್ವಾಮಿಯ ದರ್ಶನ ಪಡೆಯುವುದೇ ಒಂದು ವಿಶಿಷ್ಟ ಅನುಭವ. ಅಂದ ಹಾಗೆ ಗುಹೆ ಒಳಗಡೆಯ ಮಬ್ಬು ಕತ್ತಲಿನಲ್ಲಿ ಮಾತ್ರವಲ್ಲದೆ ನೀರಿನಲ್ಲಿ ನಡೆಯುವುದಕ್ಕೆ ಮಾನಸಿಕ ಸಿದ್ಧತೆ ಕೂಡ ಅಗತ್ಯ. ಗುಹೆಯಲ್ಲಿನ ನೀರು ಯಾವುದೇ ಸಂದರ್ಭದಲ್ಲಿ ಕೂಡ ಎದೆ ಮಟ್ಟ ಮೀರುವುದಿಲ್ಲ. ಈ ನೀರಿನಲ್ಲಿ ಗಂಧಕದ ಅಂಶ ಉಂಟು. ನೀರು ಚಳಿಗಾಲದಲ್ಲಿ ಕೂಡ ಬೆಚ್ಚಗಿನ ಅನುಭವ ನೀಡುತ್ತದೆ. ಈ ನೀರಿನಲ್ಲಿ ಎಷ್ಟು ಸಲ ಓಡಾಡಿದರು ಕೂಡ ಶೀತ ಆಗುವುದಿಲ್ಲ. ಔಷಧೀಯ ಗುಣಗಳನ್ನು ಹೊಂದಿರುವ ಈ ನೀರಿನಲ್ಲಿ ನೆನೆದರೆ ಚರ್ಮ ರೋಗ ವಾಸಿಯಾಗುತ್ತದೆ ಎಂಬ ಗಾಢ ವಿಶ್ವಾಸ ಭಕ್ತಾದಿಗಳದ್ದು. ಗುಹೆ ಒಳಗಡೆ ಶ್ವಾಸೋಚ್ಛಾಸಕ್ಕೆ ತೊಂದರೆಯಾಗದಂತೆ ಹೊರಗಡೆಯಿಂದ ಗಾಳಿ ಬರುವ ವ್ಯವಸ್ಥೆ ಮಾಡಲಾಗಿದೆ.

ಝರಣಿ ನರಸಿಂಹ ಸ್ವಾಮಿ ಮಂದಿರ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಸ್ವಾಮ್ಯದಲ್ಲಿದೆ. ಶ್ರೀ ನರಸಿಂಹ ಸ್ವಾಮಿಯ ದರ್ಶನ ಪಡೆಯಲು ಗುಹೆ ಒಳಗಡೆ ನಡೆದುಕೊಂಡು ಹೋಗುವ ಮುನ್ನ ಪಂಚೆ (ಲುಂಗಿ), ಟವೆಲ್, ಮಹಿಳೆಯರು ಪ್ರತ್ಯೇಕ ಸೀರೆ ತರಬೇಕು. ಕೌಂಟರ್‍ನಲ್ಲಿ ಟಿಕೆಟ್ ಪಡೆದು ಗುಹೆಯ ಮುಂಭಾಗದಲ್ಲಿ ಸರತಿಯಲ್ಲಿ ನಿಂತು ಶ್ರೀ ನರಸಿಂಹ ಸ್ವಾಮಿ ದೇವರತ್ತ ಸಾಗಬೇಕು. ಇದಕ್ಕೂ ಮುನ್ನ ಗುಹೆಯಿಂದ ಹರಿದು ಗೋಮುಖದ ಮೂಲಕ ನೀರಿನಲ್ಲಿ ಸ್ನಾನ ಮಾಡಬೇಕು. ಅನಾರೋಗ್ಯ, ಇಳಿ ವಯಸ್ಸು ಮತ್ತಿತರೆ ಕಾರಣಗಳಿಂದಾಗಿ ಗುಹೆ ಒಳಗಡೆ ನಡೆದು ಹೋಗಲು ಆಗದವರಿಗೆ ಮಂದಿರದ ಮುಂಭಾಗದಲ್ಲಿಯೇ ಶ್ರೀ ನರಸಿಂಹ ಸ್ವಾಮಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಸಮರ್ಪಿಸುವ ವ್ಯವಸ್ಥೆ ಉಂಟು.

ಭಕ್ತಾದಿಗಳ ಪರವಾಗಿ ಪೂಜೆ ಸಲ್ಲಿಸಲು ಅಥವಾ ಪೂಜೆ ಸಲ್ಲಿಸಲು ಭಕ್ತಾದಿಗಳಿಗೆ ಅನುಕೂಲತೆಗಳಿಗಾಗಿ ಅರ್ಚಕರು ಗುಹೆಯ ಒಳಗಡೆ ಇರುತ್ತಾರೆ. ವಿಶೇಷ ಪೂಜೆ ಸಲ್ಲಿಸ ಬಯಸುವ ಭಕ್ತಾದಿಗಳು ತಮ್ಮೊಂದಿಗೆ ಅರ್ಚಕರನ್ನು ಕರೆದುಕೊಂಡು ಹೋಗಬೇಕು.

ಬೆಂಗಳೂರಿನಿಂದ ಬರಲು ರೈಲು ಸೌಕರ್ಯವಿದೆ. ಬೆಂಗಳೂರು-ನಾಂದೇಡ್ ಎಕ್ಸ್‍ಪ್ರೆಸ್ ಟ್ರೇನ್ ಬೀದರ್ ಮೂಲಕ ತನ್ನ ಗಮ್ಯ ಸೇರುತ್ತದೆ. ಇದಲ್ಲದೆ ಯಶವಂತಪುರ-ಬೀದರ್ ಎಕ್ಸ್‍ಪ್ರೆಸ್ ಟ್ರೇನ್ ಉಂಟು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ, ಕರೋನಾ ಮತ್ತು ಸುಹಾಸ್ ಮಾದರಿಯ ಬಸ್ಸುಗಳು ಬೆಂಗಳೂರು-ಬೀದರ್ ಸಂಚರಿಸುತ್ತವೆ. ಈ ಮಂದಿರ ಹೈದರಾಬಾದ್ ಹಾಗೂ ಕಲಬುರಗಿಯಿಂದ ಕ್ರಮವಾಗಿ 120 ಕಿಮಿ ಮತ್ತು 100 ಕಿಮಿಗಳ ಅಂತರದಲ್ಲಿದೆ.

Leave a Reply

Your email address will not be published. Required fields are marked *