ಆರೋಗ್ಯಕರವಾದ ತರಕಾರಿ ಸೇವನೆ ನಮ್ಮೆಲ್ಲರ ಆದ್ಯತೆ. ಸೇವನೆ ಮಾಡುವ ಎಲ್ಲಾ ಆಹಾರಗಳನ್ನು ಮಿತ ಪ್ರಮಾಣದಲ್ಲಿ ಕಾಯ್ದುಕೊಂಡರೆ ಆರೋಗ್ಯಕ್ಕೆ ಯಾವುದೇ ತೊಂದರೆ ಇರುವುದಿಲ್ಲ. ರಕ್ತದಲ್ಲಿನ ಸಕ್ಕರೆ ಅಂಶದ ಬಗ್ಗೆ ಪ್ರತಿ ಬಾರಿ ಆಹಾರ ಸೇವನೆ ಮಾಡುವಾಗ ಜಾಗ್ರತೆ ವಹಿಸಬೇಕು. ಮಧುಮೇಹ ಇದ್ದವರಿಗೂ ಕೂಡ ಇದು ಕಡ್ಡಾಯವಾಗಿ ಅನ್ವಯವಾಗುತ್ತದೆ. ತರಕಾರಿಗಳನ್ನು ಮತ್ತು ಹಣ್ಣುಗಳ ಸೇವನೆ ಮಾಡುವ ಸಂದರ್ಭದಲ್ಲಿ ಸಕ್ಕರೆ ಕಾಯಿಲೆ ಇರುವವರು ಇನ್ನಿತರ ಆಹಾರ ಪದಾರ್ಥಗಳಲ್ಲಿ ಕಂಡುಬರುವ ಸಿಹಿ ಅಂಶದ ವಿಚಾರವಾಗಿ ಗಮನಹರಿಸಬೇಕು. ಈಗ ಇರುವ ತರಕಾರಿಗಳಲ್ಲಿ ಸ್ವಲ್ಪ ಸಿಹಿಯ ಅನುಭವ ಕೊಡುವ ಬೀಟ್ರೋಟ್ ಬಗ್ಗೆ ಮಾತನಾಡುವುದಾದರೆ ಇದು ತನ್ನಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶವನ್ನು ಒಳಗೊಂಡಿದೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವವರು ಇದನ್ನು ಸೇವನೆ ಮಾಡಿದರೆ ಮಧುಮೇಹ ನಿಯಂತ್ರಣ ತಪ್ಪುತ್ತದೆಯೇ ಎಂಬ ಬಗ್ಗೆ ಸಾಕಷ್ಟು ಜನರಿಗೆ ಅನುಮಾನವಿದೆ. ಈ ಲೇಖನದಲ್ಲಿ ಮಧುಮೇಹಕ್ಕೆ ಸಂಬಂಧಪಟ್ಟಂತೆ ಮತ್ತು ಬೀಟ್ರೂಟ್ ಸೇವನೆಯ ವಿಚಾರವಾಗಿ ಕೆಲವೊಂದು ಅಂಶಗಳನ್ನು ಪರಿಹಾರದ ರೂಪದಲ್ಲಿ ತಿಳಿಸಿಕೊಡಲಾಗಿದೆ.

ಬೀಟ್ರೂಟ್ ನಲ್ಲಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಸಾಕಷ್ಟು ಬಗೆಯ ಪೌಷ್ಟಿಕ ಸತ್ವಗಳ ಮಹಾಪೂರವೇ ಅಡಗಿದೆ. ನೈಸರ್ಗಿಕವಾಗಿ ಇದರಲ್ಲಿ ಸಿಹಿ ಅಂಶ ಕಂಡು ಬಂದರೂ ಕೂಡ ಇದರಲ್ಲಿರುವ ಇನ್ನಿತರ ಪೌಷ್ಟಿಕ ಸತ್ವಗಳ ಪ್ರಮಾಣ ಅಂದರೆ ನಾರಿನ ಅಂಶ, ಪೊಟಾಶಿಯಂ ಅಂಶ, ಫೋಲೆಟ್ ಇತ್ಯಾದಿಗಳು ಈಗಾಗಲೇ ಮಧುಮೇಹ ಹೊಂದಿರುವ ಜನರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು. ಬೀಟ್ರೂಟ್ ನಲ್ಲಿ ಕಂಡು ಬರುವ ಗ್ಲೈಸೆಮಿಕ್ ಸೂಚ್ಯಂಕ 64 ಆಗಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ ಇಷ್ಟು ಪ್ರಮಾಣದ ಸಕ್ಕರೆ ಅಂಶ ಕಡಿಮೆಯೇನಲ್ಲ. ಆದರೂ ಕೂಡ ನೈಸರ್ಗಿಕ ಸಕ್ಕರೆ ಪ್ರಮಾಣ ಆಗಿರುವುದರಿಂದ ನಮ್ಮ ದೇಹದಲ್ಲಿ ಇದು ಬಹಳ ಬೇಗನೆ ಗ್ಲೂಕೋಸ್ ಆಗಿ ಪರಿವರ್ತನೆ ಆಗುವುದಿಲ್ಲ. ಹೀಗಾಗಿ ಆರೋಗ್ಯಕ್ಕೆ ಅಡ್ಡ ಪರಿಣಾಮ ಉಂಟಾಗುವುದಿಲ್ಲ.

ಒಂದು ಅಧ್ಯಯನ ಹೇಳುವ ಹಾಗೆ ಬೀಟ್ರೂಟ್ ಗಳಲ್ಲಿ ನೈಟ್ರೇಟ್ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ನಮ್ಮ ಅರಿವಿನ ಸಾಮರ್ಥ್ಯವನ್ನು ಹೆಚ್ಚು ಮಾಡುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದು. ಮಧುಮೇಹ ಸಮಸ್ಯೆ ಹೊಂದಿದವರಿಗೆ ಇದರಿಂದ ಸಾಕಷ್ಟು ಅನುಕೂಲವಿದೆ. ಅಷ್ಟೇ ಅಲ್ಲದೆ ಬೀಟ್ರೂಟ್ ಜ್ಯೂಸ್ ತನ್ನಲ್ಲಿ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಕಾರಣದಿಂದ ದೇಹದಲ್ಲಿ ಮೊದಲೇ ಕಂಡುಬರುವ ಗ್ಲುಕೋಸ್ ಮಟ್ಟವನ್ನು ಇದು ನಿಯಂತ್ರಣ ಮಾಡುತ್ತದೆ. ಅಷ್ಟೇ ಅಲ್ಲದೆ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಜೊತೆಗೆ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ.ಅಧ್ಯಯನಗಳ ಪ್ರಕಾರ ನಮ್ಮ ಆರೋಗ್ಯಕ್ಕೆ ಬೀಟ್ರೂಟ್ ನಿಂದ ಹೆಚ್ಚಿನ ಪ್ರಯೋಜನ ಸಿಗಬೇಕು ಎಂದರೆ ಅದನ್ನು ಜ್ಯೂಸ್ ತಯಾರುಮಾಡಿ ಸೇವನೆ ಮಾಡಬಹುದು.

Leave a Reply

Your email address will not be published. Required fields are marked *