ನಮಸ್ತೆ ಪ್ರಿಯ ಓದುಗರೇ, ರಾಮನ ಬಂಟನಾದ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ದಿನದಲ್ಲಿ ಒಂದು ಬಾರಿ ಸ್ಮರಣೆ ಮಾಡಿದ್ರೂ ಸಾಕು ಆ ದೇವ ನಮ್ಮಲ್ಲಿರುವ ಭಯವನ್ನು, ದುಗುಡ, ದುಮ್ಮಾನಗಳನ್ನು ದೂರ ಮಾಡ್ತಾನೆ. ಅದರಲ್ಲೂ ಈ ಕ್ಷೇತ್ರದಲ್ಲಿ ನೆಲೆಸಿರುವ ಆಂಜನೇಯ ಸ್ವಾಮಿಯು ಭಕ್ತರ ಅಭಿಷ್ಟೆಗಳನ್ನು ನೆರವೇರಿಸುವುದು ಜೊತೆಗೆ ತನ್ನನ್ನು ನಂಬಿ ಬಂದ ಭಕ್ತರ ಆರೋಗ್ಯ ಸಮಸ್ಯೆಗಳನ್ನು ಪರಿಹರಿ ಸುತ್ತಾನೆ. ಬನ್ನಿ ಇಂದಿನ ಲೇಖನದಲ್ಲಿ ಪುರಾಣ ಪ್ರಸಿದ್ಧ ಆದ ಕೋಟೆ ವರದಾಂಜನೇಯ ಸ್ವಾಮಿಯ ದರ್ಶನ ದ ಬಗೆಗಿನ ಮಾಹಿತಿಯನ್ನು ಪಡೆದುಕೊಂಡು ಬರೋಣ. ಕೋಟೆ ವರದಾಂಜನೇಯ ಸ್ವಾಮಿಯ ಈ ದೇಗುಲವು ಸುಮಾರು 700-800 ವರ್ಷಗಳಷ್ಟು ಇತಿಹಾಸ ಹೊಂದಿದ್ದು, ಈ ಆಲಯವು ಪುಟ್ಟದಾದ ಗೋಪುರ, ಗರುಡ ಗಂಬ, ಪ್ರದಕ್ಷಿಣಾ ಪಥ, ಹಾಗೂ ಗರ್ಭ ಗೃಹವನ್ನು ಒಳಗೊಂಡಿದೆ. ಈ ಪುಣ್ಯ ಕ್ಷೇತ್ರದಲ್ಲಿ ಆಂಜನೇಯ ಸ್ವಾಮಿಯು ವರದಾಂಜನೇಯ ಎಂಬ ಹೆಸರಿನಿಂದ ನೆಲೆ ನಿಂತಿದ್ದು ದೇವನು ಅಭಯ ಹಸ್ತವನ್ನು ಹಿಡಿದು ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಿದ್ದಾನೆ. ದೇವರ ಮೂರ್ತಿಯನ್ನು ಕೆತ್ತಿರುವ ಪ್ರಳವಳಿಯಲ್ಲಿ ಒಂದು ಕಡೆ ಚಕ್ರ, ಇನ್ನೊಂದು ಕಡೆ ಶಂಖವನ್ನು ಚಿತ್ರಿಸಲಾಗಿದೆ. ಕಪ್ಪು ವರ್ಣ ಶಿಲೆಯಲ್ಲಿರುವ ಈ ದೇವನ ಮೂರ್ತಿಯನ್ನು ನೋಡ್ತಾ ಇದ್ರೆ ನಮಗೆ ಅರಿವಿಲ್ಲದೆಯೇ ಮನದಲ್ಲಿ ಭಕ್ತಿಯ ಸಿಂಚನವಾಗುತ್ತೆ.

ಇಲ್ಲಿ ನೆಲೆಸಿರುವ ಸ್ವಾಮಿಯು ಅಲಂಕಾರ ಪ್ರಿಯನಾಗಿದ್ದು ವಿಧ್ಯಾಭ್ಯಾಸ ಸಮಸ್ಯೆ, ಆರ್ಥಿಕ ಸಮಸ್ಯೆ, ಕೌಟುಂಬಿಕ ಸಮಸ್ಯೆ, ಜಮೀನಿನ ಸಮಸ್ಯೆ, ಹೀಗೆ ಏನೇ ಸಮಸ್ಯೆಗಳಿದ್ದರೂ ಈ ಕ್ಷೇತ್ರಕ್ಕೆ ಬಂದು ಸ್ವಾಮಿಯ ಬಳಿ ತಂದೆ ನಿನಗೆ ಅಲಂಕಾರ ಸೇವೆಯನ್ನು ಮಾಡಿಸುತ್ತೇನೆ ನನ್ನ ಕಷ್ಟಗಳನ್ನು ಪರಿಹರಿಸಿ ಕೊಡು ಎಂದು ಭಕ್ತಿಯಿಂದ ಬೇಡಿಕೊಂಡರೆ ಅದ ಸ್ವಾಮಿ ಸಮಸ್ಯೆಗಳನ್ನು ದೂರ ಮಾಡ್ತಾನೆ ಎಂದು ಹೇಳಲಾಗುತ್ತದೆ. ವೀಳ್ಯದೆಲೆ ಅಲಂಕಾರ ಸೇವೆ, ಸಿಂಧೂರ ಅಲಂಕಾರ ಸೇವೆ, ಬೆಣ್ಣೆ ಅಲಂಕಾರ ಸೇವೆ, ಹೂವಿನ ಅಲಂಕಾರ ಸೇವೆ ಹೀಗೆ ಯಾವ ಬಗೆಯ ಅಲಂಕಾರ ಸೇವೆಗಳನ್ನು ಬೇಕಾದರೂ ಭಕ್ತಾದಿಗಳು ಹರಕೆ ಹೊತ್ತು ಕೊಳ್ಳಬಹುದಾಗಿದೆ. ಇನ್ನೂ ಅನಾರೋಗ್ಯ ಸಮಸ್ಯೆ ಇಂದ ಬಳಲುವವರು ಈ ಕ್ಷೇತ್ರಕ್ಕೆ ಬಂದು ಹನ್ನೆರೆಡು ರೂಪಾಯಿಗಳನ್ನು ಕೊಟ್ಟು ಮುಡಿಪು ಸೇವೆ ಮಾಡಿಸುವುದಾಗಿ ಹರಕೆ ಹೊತ್ತುಕೊಂಡರೆ ಅವರ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಹರಕೆಯನ್ನು ಹೊತ್ತುಕೊಂಡವರು ದೇವರಲ್ಲಿ ವರ ಪ್ರಸಾದವನ್ನು ಕೇಳ್ತಾರೆ, ಆಗ ಸ್ವಾಮಿಯು ಹೂವಿನ ಪ್ರಸಾದವನ್ನು ಬೀಳಿಸುವುದರ ಮುಖಾಂತರ ಕಾಯಿಲೆಗಳು ಪರಿಹಾರ ಆಗುತ್ತೋ ಇಲ್ಲವೋ ಎಂದು ಸೂಚನೆಯನ್ನು ನೀಡುತ್ತದೆ. ಸ್ವಾಮಿಯು ಖಾಯಿಲೆ ಗುಣವಾಗುತ್ತದೆ ಎಂದು ಹೂವಿನ ಪ್ರಸಾದವನ್ನು ನೀಡಿದ್ರೆ ಅವರು ಕನಿಷ್ಟ ಮೂರು, ಐದು ಅಥವಾ ಒಂಭತ್ತು ದಿನಗಳ ಕಾಲ ದೇಗುಲದಲ್ಲಿ ತಂಗಿದ್ದು ಬೆಳಿಗ್ಗೆ 5 ಗಂಟೆಗೆ ಎದ್ದು ಶುಚಿರ್ಭೂತರಾಗಿ ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿ ಇಲ್ಲಿ ನಡೆಯುವ ಮಹಾ ಮಂಗಳಾರತಿಯಲ್ಲಿ ಪಾಲ್ಗೊಂಡು ಆಂಜನೇಯನನ್ನು ಭಜಿಸಿದ್ರೆ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಇದುವರೆಗೂ ಈ ದೇವನ ಕೃಪೆಯಿಂದ ಆರೋಗ್ಯವನ್ನು ಪಡೆದ ಉದಾಹರಣೆಗಳು ಈ ಕ್ಷೇತದಲ್ಲಿ ಸಾಕಷ್ಟಿವೆ.

ಪ್ರತಿ ವರ್ಷವೂ ಯುಗಾದಿ ಹಬ್ಬದ ನಂತರ ಈ ಕ್ಷೇತ್ರದಲ್ಲಿ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ. ಈ ದಿನ ರಾಜ್ಯದ ನಾನಾ ಮೂಲೆಗಳಿಂದ ಭಕ್ತರು ಆಗಮಿಸಿ ಆಂಜನೇಯ ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ. ನಿತ್ಯ ಪೂಜೆಗೊಳ್ಳುವ ಇಲ್ಲಿನ ವರಾದಾಂಜನೆಯ ಸ್ವಾಮಿಗೆ ಶನಿವಾರದಂದು ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ಒಂದೊಂದು ದಿನವೂ ಒಂದೊಂದು ಬಗೆಯ ಅಲಂಕಾರದಲ್ಲಿ ಶೋಭಿಸುವ ಈ ದೇವನನ್ನು ನೋಡೋದೇ ಕಣ್ಣಿಗೊಂದು ಹಬ್ಬವಾಗಿದೆ. ಇಲ್ಲಿಗೆ ಬರುವ ಭಕ್ತಾದಿಗಳು ದೇವರಿಗೆ ಪಂಚಾಮೃತ ಅಭಿಷೇಕ ಹಾಗೂ ಬಗೆ ಬಗೆಯ ಅಲಂಕಾರ ಸೇವೆಗಳನ್ನ ಮಾಡಿಸಬಹುದು. ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಪ್ರತಿ ದಿನವೂ ಮಧ್ಯಾನ 12 ಗಂಟೆ ಇಂದ 3.30 ರ ವರೆಗೆ ರಾತ್ರಿ 7-8.30 ರ ವರೆಗೆ ಅನ್ನ ಪ್ರಸಾದವನ್ನು ನೀಡಲಾಗುತ್ತದೆ. ಅಲ್ಲದೇ ಈ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ವಸತಿ ಸೌಲಭ್ಯ ಕೂಡ ಲಭ್ಯವಿರುತ್ತದೆ. ಅತ್ಯಂತ ಶಕ್ತಿಶಾಲಿಯಾದ ಈ ದೇವನನ್ನು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ರ ವರೆಗೆ ದರ್ಶನ ಮಾಡಬಹುದಾಗಿದೆ. ಆಂಜನೇಯ ಸ್ವಾಮಿಯು ನೆಲೆಸಿರುವ ಈ ಪುಣ್ಯ ಕ್ಷೇತ್ರವೂ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ತಾವರೆಕೆರೆ ಎಂಬ ಊರಿನಲ್ಲಿದೆ. ಈ ಪುಣ್ಯ ಕ್ಷೇತ್ರವೂ ತುಮಕೂರಿನಿಂದ 80 ಕಿಮೀ, ಕುಣಿಗಲ್ ನಿಂದ 30 ಕಿಮೀ ದೂರದಲ್ಲಿದೆ. ತುಮಕೂರು ಉತ್ತಮ ರಸ್ತೆ, ಹಾಗೂ ರೈಲ್ವೇ ಸಂಪರ್ಕವನ್ನು ಹೊಂದಿದ್ದು, ಕುಣಿಗಲ್ ನಿಂದ ಸರ್ಕಾರಿ ಬಸ್ ಮುಖಾಂತರ ಸುಲಭವಾಗಿ ಈ ದೇಗುಲಕ್ಕೆ ತಲುಪಬಹುದು. ಸಾಧ್ಯವಾದರೆ ತುಮಕೂರಿಗೆ ಹೋದಾಗ ನೀವು ಒಮ್ಮೆ ಈ ಪುಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಆಂಜನೇಯ ಸ್ವಾಮಿಯನ್ನು ಕಣ್ಣು ತುಂಬಿಕೊಂಡು ಬನ್ನಿ. ಶುಭದಿನ.

Leave a Reply

Your email address will not be published. Required fields are marked *