ಬೆಳಗುತ್ತಿಯಲ್ಲಿರು ತೀರ್ಥ ರಾಮೇಶ್ವರ ದೇವಾಲಯಕ್ಕೆ ರಾಜ್ಯದ ಹಲವು ಕಡೆಯಿಂದ ಭಕ್ತರು ಆಗಮಿಸುತ್ತಾರೆ, ಈ ದೇವಾಲಯ ಕರ್ನಾಟಕದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನಲ್ಲಿದೆ. ಬೆಳಗುತ್ತಿಗೆ ಸುಮಾರು ೨ ಕಿ.ಮೀ.ದೂರದಲ್ಲಿರುವ ಬೆಟ್ಟದ ಮೇಲೆ ತೀರ್ಥರಾಮೇಶ್ವರ ದೇವಸ್ಥಾನವಿದೆ. ಇದು ಬಯಲು ಸೀಮೆಯ ನಡುವಣ ಬೆಟ್ಟದ ಪ್ರಕೃತಿ ರಮಣೀಯವಾದ ಪ್ರಶಾಂತ ತಾಣ.ಇದು ದಕ್ಷಿಣ ಕಾಶಿ ಎಂದೇ ಕರೆಯಲ್ಪಡುತ್ತದೆ. ಇಲ್ಲಿರುವ ನೀರಿನ ಕುಂಡ- “ತೀರ್ಥರಾಮೇಶ್ವರ ಪುಣ್ಯ ತೀರ್ಥವು” ಎಲ್ಲ ಋತುಮಾನಗಳಲ್ಲೂ ತುಂಬಿರುತ್ತದೆ. ಈ ಪುಣ್ಯತೀರ್ಥದ ನೈರ್ಮಲ್ಯವನ್ನು ಕಾಪಾಡಲಿಕ್ಕಾಗಿ ಇದರ ನೀರನ್ನು ಕೊಡದಲ್ಲಿ ತುಂಬಿ ತೆಗೆದುಕೊಂಡು ಹೋಗಿ ಬೇರೆಡೆ ಸ್ನಾನಮಾಡುತ್ತಾರೆ.

ಈ ಪುಣ್ಯತೀರ್ಥ ತೀರ್ಥರಾಮೇಶ್ವರದಲ್ಲಿ ನೀರು ಬಳಸಿಕೊಂಡಷ್ಟೂ ಅದು ಭರ್ತಿಯಾಗಿ ತುಂಬಿ ತುಳುಕದಂತಿರುವುದೇ ಇದರ ವೈಶಿಷ್ಟ ವಾಗಿದೆ. ಈ ತೀರ್ಥಕುಂಡಕ್ಕೆ ಶೋಭೆಯೆನಿಸುವಂತಹ ಕಲ್ಲಿನ ಮಂಟಪವಿದೆ. ಆ ಮಂಟಪದ ಮೇಲೆ ಮೊಸಳೆ, ಮೊಸಳೆಯ ಮೇಲೇ ಗಂಗೆ ನೀರಿನ ಕಲಶ ಹಿಡಿದು ಕುಳಿತಿರುವ ಭಂಗಿ ಗಮನ ಸೆಳೆಯುತ್ತದೆ.

ಬೆಟ್ಟದ ಝರಿಯಂತೆ ಹರಿದು ತುಂಬುವ ಈ ಪುಣ್ಯತೀರ್ಥದಲ್ಲಿ ಸ್ನಾನಮಾಡಿದರೆ, ಕಾಶಿಯಲ್ಲಿ ಗಂಗಾನದಿ ಸ್ನಾನಮಾಡಿದಷ್ಟೇ ಪುಣ್ಯ ಬರುತ್ತದೆ ಎಂಬ ಪ್ರತೀತಿ ಇದೆ. ಲಿಂಗರೂಪಿಯಾಗಿ ಕಂಗೊಳಿಸುವ ತೀರ್ಥ ರಾಮೇಶ್ವರನಿಗೆ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳು ನೆರವೇರಿದಾಗ ಹರಕೆ ಕಾಣಿಕೆಗಳನ್ನೊಪ್ಪಿಸುವುದು ವಾಡಿಕೆಯಲ್ಲಿದೆ. ಇಲ್ಲಿ ಪುಟ್ಟದೊಂದು ಬ್ರಹ್ಮದೇವರ ಗುಡಿಯೂ ಇದೆ.

Leave a Reply

Your email address will not be published. Required fields are marked *